ಚೆನ್ನೈ/ಮಂಗಳೂರು,ಮೇ. 13 (DaijiworldNews/AK): ಸಿಎಸ್ಕೆ ಫ್ರಾಂಚೈಸಿ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಆಟಗಾರನ ಬದಲಿಗೆ ಕರ್ನಾಟಕ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಗಾಯಗೊಂಡು ಐಪಿಎಲ್ನಿಂದ ಹೊರಬಿದ್ದ ಯುವ ವೇಗಿ ರಾಮಕೃಷ್ಣ ಘೋಷ್ ಬದಲಿಗೆ ಕರ್ನಾಟಕದ ಆಲ್ರೌಂಡರ್ ಮೆಕ್ನೀಲ್ ಹ್ಯಾಡ್ಲಿ ನೊರೊನ್ಹಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಲೀಗ್ ಹಂತದಲ್ಲಿ ಮೂರು ಪಂದ್ಯಗಳು ಉಳಿದಿರುವಾಗ, ಪ್ಲೇ-ಆಫ್ ರೇಸ್ನಲ್ಲಿ ಉಳಿಯಲು ಈ ಬದಲಾವಣೆ ನಿರ್ಣಾಯಕವಾಗಿರುತ್ತದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ರಾಮಕೃಷ್ಣ ಘೋಷ್ ಬೌಲಿಂಗ್ ಮಾಡುವಾಗ ಗಾಯಕ್ಕೆ ತುತ್ತಾದರು. ಇದರಿಂದಾಗಿ, ಅವರು ಇಡೀ ಆವೃತ್ತಿಯಿಂದ ಹೊರಗುಳಿದಿದ್ದರು.
ಹೀಗಾಗಿ ರಾಮಕೃಷ್ಣ ಘೋಷ್ ಬದಲಿಗೆ 24 ವರ್ಷದ ಮೆಕ್ನೀಲ್ ನೊರೊನ್ಹಾ ಸಿಎಸ್ಕೆ ತಂಡವನ್ನು ಸೇರಿಕೊಂಡಿದ್ದಾರೆ. ಕರ್ನಾಟಕ ಪರ ದೇಶಿ ಕ್ರಿಕೆಟ್ ಆಡುವ ಮೆಕ್ನೀಲ್ ಹ್ಯಾಡ್ಲಿ ನೊರೊನ್ಹಾ ಆಲ್ರೌಂಡರ್ ಆಗಿದ್ದು, ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ಡ್ರಾಗನ್ಸ್ ಮತ್ತು ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
2024-25ರ ನಾಯ್ಡು ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮೆಕ್ನೀಲ್ ಹ್ಯಾಡ್ಲೀ ನೊರೊನ್ಹಾ ತ್ರಿಪುರ ವಿರುದ್ಧ ತ್ರಿಶತಕ ಬಾರಿಸಿ ಮಿಂಚಿದ್ದರು. ಆ ಪಂದ್ಯದಲ್ಲಿ, ಅವರು 25 ಸಿಕ್ಸರ್ಗಳು ಮತ್ತು 23 ಬೌಂಡರಿಗಳನ್ನು ಒಳಗೊಂಡಂತೆ 345 ರನ್ ಬಾರಿಸಿದ್ದರು.
2025 ರ ಮಹಾರಾಜ ಟ್ರೋಫಿಯಲ್ಲಿ, ಮಂಗಳೂರು ಡ್ರಾಗನ್ಸ್ ಪರ ಆಡಿದ್ದ ನೊರೊನ್ಹಾ 253 ರನ್ ಬಾರಿಸುವುದರ ಜೊತೆಗೆ 10 ವಿಕೆಟ್ಗಳನ್ನು ಪಡೆದಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಪರ ಆಡಿದ ಅನುಭವ ಹೊಂದಿರುವ ನೊರೊನ್ಹಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದಾಗಿ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ದೃಢಪಡಿಸಿದ್ದಾರೆ.