ಬೆಂಗಳೂರು, ಮೇ. 08 (DaijiworldNews/AA): 10,000 ಹೆಚ್ಚುವರಿ ಉಚಿತ ಟಿಕೆಟ್ಗಳ ಬೇಡಿಕೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ 2026ರ ಫೈನಲ್ ಪಂದ್ಯವನ್ನು ಅಹಮದಾಬಾದ್ಗೆ ಸ್ಥಳಾಂತರಕ್ಕೆ ಮುಖ್ಯ ಕಾರಣ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಹಿತಿ ನೀಡಿದ್ದಾರೆ.

"ಐಪಿಎಲ್ ಶಿಷ್ಟಾಚಾರದ ಅನ್ವಯ ಕೇವಲ ಶೇ. 15ರಷ್ಟು ಉಚಿತ ಟಿಕೆಟ್ಗಳನ್ನು ಮಾತ್ರ ಆತಿಥೇಯ ಸಂಸ್ಥೆಗೆ ನೀಡಲು ಅವಕಾಶವಿದೆ. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಇದಕ್ಕಿಂತ ಹೆಚ್ಚುವರಿಯಾಗಿ ಸುಮಾರು 10,000 ಟಿಕೆಟ್ಗಳನ್ನು ನೀಡುವಂತೆ ಪಟ್ಟು ಹಿಡಿದಿತ್ತು" ಎಂದು ತಿಳಿಸಿದರು.
"ಮೇ 2ರಂದು ಕೆಎಸ್ಸಿಎ ಕಳುಹಿಸಿದ ಇಮೇಲ್ ನೋಡಿ ನಾವು ಶಾಕ್ಗೆ ಒಳಗಾದೆವು. ಆ ಇಮೇಲ್ನಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಕರ್ನಾಟಕ ಸರ್ಕಾರಕ್ಕಾಗಿ (700 ಟಿಕೆಟ್ಗಳು) ದೊಡ್ಡ ಪ್ರಮಾಣದ ಉಚಿತ ಟಿಕೆಟ್ಗಳನ್ನು ಕೇಳಲಾಗಿತ್ತು" ಎಂದು ಹೇಳಿದರು.
"ಇಷ್ಟು ದೊಡ್ಡ ಪ್ರಮಾಣದ ಉಚಿತ ಟಿಕೆಟ್ಗಳನ್ನು ನೀಡಲು ಸಾಧ್ಯವಾಗದ ಕಾರಣ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಕಡಿಮೆ ಆಸನ ಸಾಮರ್ಥ್ಯದಿಂದಾಗಿ (36,000) ಬಿಸಿಸಿಐ ಫೈನಲ್ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂಗೆ (1.30 ಲಕ್ಷ ಸಾಮರ್ಥ್ಯ) ಸ್ಥಳಾಂತರ ಮಾಡಿದೆ" ಎಂದರು.
"ಒಂದು ವೇಳೆ ನಾವು ಇಷ್ಟು ದೊಡ್ಡ ಪ್ರಮಾಣದ ಉಚಿತ ಟಿಕೆಟ್ಗಳನ್ನು ನೀಡಿದ್ದರೆ, ಸಾಮಾನ್ಯ ಜನರಿಗೆ ಕೇವಲ ಕೆಲವು ಸಾವಿರ ಟಿಕೆಟ್ಗಳು ಮಾತ್ರ ಉಳಿಯುತ್ತಿದ್ದವು. ಇದು ಸುಪ್ರೀಂ ಕೋರ್ಟ್ ನಿರ್ದೇಶನಗಳ ನೇರ ಉಲ್ಲಂಘನೆಯಾಗುತ್ತಿತ್ತು" ಎಂದು ವಿವರಿಸಿದ್ದಾರೆ.
"ಲೀಗ್ ಪಂದ್ಯಗಳಲ್ಲಿ ಕೆಲವು ರಿಯಾಯಿತಿ ಕೊಡಬಹುದು. ಆದರೆ ಪ್ಲೇ-ಆಫ್ ಮತ್ತು ಫೈನಲ್ ಪಂದ್ಯಗಳು ಸಂಪೂರ್ಣವಾಗಿ ಬಿಸಿಸಿಐ ನಿಯಂತ್ರಣದಲ್ಲಿರುತ್ತವೆ. ಅಲ್ಲಿ ಯಾವುದೇ ಶಿಷ್ಟಾಚಾರದ ಉಲ್ಲಂಘನೆಗೆ ಅವಕಾಶವಿಲ್ಲ" ಎಂದು ನುಡಿದರು.