ಮುಂಬೈ, ಮೇ. 04 (DaijiworldNews/AA): ಐಪಿಎಲ್ ಎಂದರೆ ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಸಮಬಲದ ಹೋರಾಟ ಎಂದು ನೀವು ಭಾವಿಸಿದ್ದರೆ, ಅದು ನಿಮ್ಮ ತಪ್ಪು ಕಲ್ಪನೆ! ಆಧುನಿಕ ಕ್ರಿಕೆಟ್ನ ಈ ಚುಟುಕು ಸಮರ ಈಗ ಕೇವಲ ಕ್ರೀಡೆಯಾಗಿ ಉಳಿದಿಲ್ಲ, ಬದಲಾಗಿ ಕೋಟಿ ಕೋಟಿ ಹಣ ಹರಿಯುವ ಒಂದು ಬೃಹತ್ ಉದ್ಯಮವಾಗಿ ಮಾರ್ಪಟ್ಟಿದೆ ಎಂದು ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ಕೋಚ್ ಹಾಗೂ ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ 244 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನಂತರ ಮಾತನಾಡಿದ ಅವರು, "ಪ್ರೇಕ್ಷಕರು ಮೈದಾನಕ್ಕೆ ಬರುವುದು ಬೌಂಡರಿ ಮತ್ತು ಸಿಕ್ಸರ್ಗಳನ್ನು ನೋಡಲು. ಪಿಚ್ ಬೌಲರ್ಗಳಿಗೆ ಪೂರಕವಾಗಿದ್ದರೆ, ಪಂದ್ಯಗಳು ಬೋರಿಂಗ್ ಆಗುತ್ತವೆ ಎಂದು ಪ್ರಾಯೋಜಕರು ಮತ್ತು ಸಂಘಟಕರು ಭಾವಿಸುತ್ತಾರೆ. ಆದ್ದರಿಂದ, ಬ್ಯಾಟರ್ಗಳಿಗೆ ಪೂರಕವಾದ ಪಿಚ್ಗಳನ್ನು ಸಿದ್ಧಪಡಿಸುವುದು ಅನಿವಾರ್ಯವಾಗಿದೆ" ಎಂದು ತಿಳಿಸಿದ್ದಾರೆ.
"ನಾನು ಅಥವಾ ಶೇನ್ ವಾರ್ನ್ ಈ ಕಾಲದಲ್ಲಿ ಬೌಲಿಂಗ್ ಮಾಡಿದ್ದರೂ ನಮಗೂ ಕೂಡ ಇದೇ ಪರಿಸ್ಥಿತಿ ಎದುರಾಗುತ್ತಿತ್ತು ಎಂದು ಹೇಳುವ ಮೂಲಕ ಬೌಲರ್ಗಳ ಅಸಹಾಯಕತೆಯನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ, ಬೌಲರ್ಗಳು ಈ ಪರಿಸ್ಥಿತಿಯನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಐಪಿಎಲ್ ಎಂಬುದು ದೊಡ್ಡ ಬಿಸಿನೆಸ್ ಆಗಿರುವುದರಿಂದ ಬೌಲರ್ಗಳು ತಮ್ಮ ಕೌಶಲ್ಯವನ್ನು ಬದಲಾಯಿಸಿಕೊಂಡು, ರನ್ ನಿಯಂತ್ರಿಸುವುದನ್ನೇ ಸಾಧನೆ ಎಂದು ಭಾವಿಸಬೇಕಿದೆ" ಎಂದಿದ್ದಾರೆ.