ಮುಂಬೈ, ಫೆ. 08 (DaijiworldNews/TA): ಟಿ20 ವಿಶ್ವಕಪ್ನ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ 29 ರನ್ಗಳ ಅಂತರದಿಂದ ಯುಎಸ್ಎ ತಂಡವನ್ನು ಸೋಲಿಸಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 161 ರನ್ಗಳನ್ನು ಕಲೆಹಾಕಿತು. ಗುರಿ ಬೆನ್ನತ್ತಿದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ತಂಡ 20 ಓವರ್ಗಳಲ್ಲಿ 132 ರನ್ಗಳಿಗೆ ಸೀಮಿತವಾಗಿ ಸೋಲೊಪ್ಪಿಕೊಂಡಿತು.

ಮೊದಲ ಟಿ20 ಪಂದ್ಯದಲ್ಲೇ ಯುಎಸ್ಎ ತಂಡ ಟೀಮ್ ಇಂಡಿಯಾ ವಿರುದ್ಧ ದಿಟ್ಟ ಪ್ರದರ್ಶನ ನೀಡಿದ್ದು ಗಮನ ಸೆಳೆಯಿತು. ವಿಶೇಷವಾಗಿ ಪವರ್ಪ್ಲೇನಲ್ಲಿ ಯುಎಸ್ಎ ಬೌಲರ್ಗಳು ಕೇವಲ 46 ರನ್ಗಳನ್ನು ಮಾತ್ರ ನೀಡುವ ಮೂಲಕ ಭಾರತೀಯ ಬ್ಯಾಟರ್ಗಳನ್ನು ಕಟ್ಟಿ ಹಾಕಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಅವರ ಏಕಾಂಗಿ ಹೋರಾಟವೇ ಭಾರತದ ಪರ ಭದ್ರ ಮೊತ್ತಕ್ಕೆ ಕಾರಣವಾಯಿತು. ಸೂರ್ಯಕುಮಾರ್ ಯಾದವ್ 84 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ ಪರಿಣಾಮ ಭಾರತ ತಂಡ 161 ರನ್ಗಳ ಸವಾಲಿನ ಗುರಿ ನಿಗದಿಪಡಿಸಿತು.
ಈ ಗುರಿಯನ್ನು ಬೆನ್ನತ್ತಿದ ಯುಎಸ್ಎ ತಂಡದ ಪರ ಕನ್ನಡಿಗ ಸಂಜಯ್ ಕೃಷ್ಣಮೂರ್ತಿ ಮಿಂಚಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟ್ಗೆ ಇಳಿದ ಸಂಜಯ್ ಕೃಷ್ಣಮೂರ್ತಿ 31 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಹಾಗೂ 1 ಫೋರ್ ಸಹಿತ 37 ರನ್ಗಳನ್ನು ಗಳಿಸಿ ತಂಡಕ್ಕೆ ಹೋರಾಟ ನೀಡಿದರು. ಮೊದಲ ಪಂದ್ಯದಲ್ಲೇ ಆತ್ಮವಿಶ್ವಾಸದ ಬ್ಯಾಟಿಂಗ್ ಮೂಲಕ ಅವರು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಸಂಜಯ್ ಕೃಷ್ಣಮೂರ್ತಿ ಅವರ ತಂದೆ ಕರ್ನಾಟಕ ಮೂಲದವರಾಗಿದ್ದು, ಸಂಜಯ್ ಅಮೆರಿಕದಲ್ಲಿ ಜನಿಸಿದರೂ ತಮ್ಮ ಬಾಲ್ಯದ ಬಹುತೇಕ ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ. ಇಲ್ಲಿ ಅವರು ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, ಕ್ರಿಕೆಟ್ ತರಬೇತಿಯನ್ನೂ ಪಡೆದಿದ್ದಾರೆ. ಎಡಗೈ ಸ್ಪಿನ್ ಬೌಲರ್ ಹಾಗೂ ಬಲಗೈ ಬ್ಯಾಟರ್ ಆಗಿರುವ ಸಂಜಯ್ ಕೃಷ್ಣಮೂರ್ತಿ, ಕರ್ನಾಟಕ ಅಂಡರ್-16 ತಂಡದ ಪರವೂ ಆಡಿದ್ದರು.
ಪ್ರಸ್ತುತ ಕರ್ನಾಟಕ ತಂಡದ ಆಟಗಾರ ಸ್ಮರಣ್ ರವಿಚಂದ್ರನ್ ಅವರೊಂದಿಗೆ ಸಂಜಯ್ ಕೃಷ್ಣಮೂರ್ತಿ ಜೊತೆಯಾಗಿ ಕ್ರಿಕೆಟ್ ಆಡಿ ಬೆಳೆದವರು ಎಂಬುದು ವಿಶೇಷ. ನಂತರ ಅಮೆರಿಕಾಕ್ಕೆ ಮರಳಿದ ಸಂಜಯ್, ಇದೀಗ ಟೀಮ್ ಇಂಡಿಯಾ ವಿರುದ್ಧ ಟಿ20 ವಿಶ್ವಕಪ್ ವೇದಿಕೆಯಲ್ಲಿ ಕಣಕ್ಕಿಳಿದು ತನ್ನ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕನ್ನಡಿಗನ ಈ ಪ್ರದರ್ಶನ ಮುಂದಿನ ಪಂದ್ಯಗಳಲ್ಲೂ ಯುಎಸ್ಎ ತಂಡಕ್ಕೆ ಬಲ ನೀಡುವ ನಿರೀಕ್ಷೆ ಮೂಡಿಸಿದೆ.