ವಡೋದರ, ಫೆ. 06 (DaijiworldNews/TA): ವಡೋದರಾದಲ್ಲಿ ಗುರುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಮೂಲಕ ಆರ್ಸಿಬಿ ತಂಡ ಎರಡನೇ ಬಾರಿಗೆ ಡಬ್ಲ್ಯುಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪಂದ್ಯಾನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ, ಡಬ್ಲ್ಯುಪಿಎಲ್ ಟ್ರೋಫಿಯನ್ನು ಆರ್ಸಿಬಿ ಅಭಿಮಾನಿಗಳಿಗೆ ಅರ್ಪಿಸಿದರು.

“ನಮ್ಮ ತಂಡಕ್ಕೆ ಅಭಿಮಾನಿಗಳ ಬಗ್ಗೆ ಅಪಾರ ಹೆಮ್ಮೆ ಇದೆ. ಆರ್ಸಿಬಿ ಅಭಿಮಾನಿಗಳು ವಿಶ್ವದಲ್ಲೇ ಅತ್ಯುತ್ತಮರು. ಅವರು ಎಲ್ಲೆಡೆ ತಂಡಕ್ಕೆ ಬೆಂಬಲ ನೀಡುತ್ತಾರೆ. ಫೈನಲ್ ಪಂದ್ಯಕ್ಕೂ ಭಾರಿ ಸಂಖ್ಯೆಯಲ್ಲಿ ಬಂದು ತಂಡವನ್ನು ಹುರಿದುಂಬಿಸಿದ ಎಲ್ಲ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು. ಈ ಟ್ರೋಫಿ ನಿಮ್ಮದೇ,” ಎಂದು ಅವರು ಹೇಳಿದರು.
ಮುಂದುವರೆದು ಮಾತನಾಡಿದ ಸ್ಮೃತಿ, “ನಾನು 2024ರಲ್ಲಿ ‘ಈ ಸಲ ಕಪ್ ನಮ್ದು’ ಎಂದು ಹೇಳಿದ್ದೆ. ಈಗ ಮತ್ತೊಮ್ಮೆ ಹೇಳಲು ಬಯಸುತ್ತೇನೆ ‘ಈ ಸಲ ಕಪ್ ನಮ್ದು 2’,” ಎಂದು ಘೋಷಿಸಿದರು. ಸ್ಮೃತಿ ಅವರ ಈ ಮಾತಿಗೆ ಸ್ಟೇಡಿಯಂನಲ್ಲಿ ನೆರೆದಿದ್ದ ಆರ್ಸಿಬಿ ಅಭಿಮಾನಿಗಳು ಜೋರಾಗಿ ಸಂಭ್ರಮಿಸಿದರು.