ಮಂಗಳೂರು, ಜೂ. 09 (DaijiworldNews/AA): ಶಿರ್ಪುರ್, ಧುಲೆಯಲ್ಲಿ ನಡೆದ ಡಬ್ಲ್ಯೂ ಐಎಫ್ಎ ಅಂತರ ಜಿಲ್ಲಾ ಸಬ್ ಜೂನಿಯರ್ ಬಾಲಕರ ಪಂದ್ಯಾವಳಿ (Inter-District Sub Junior Boys Tournament) ಅಂಡರ್-13 ಸ್ಪರ್ಧೆಯಲ್ಲಿ ಸಮರ್ಥ್ ರೈ ಅವರು ಮುಂಬಯಿ ತಂಡವನ್ನು ಪ್ರತಿನಿಧಿಸಿದ್ದಾರೆ.

ಸಮರ್ಥ್ ರೈ ಅವರು ಮಹಾರಾಷ್ಟ್ರ ರಾಜ್ಯ ಲೀಗ್ ಫುಟ್ಬಾಲ್ ಟೂರ್ನಮೆಂಟ್ನ ಅಂಡರ್-15 ವಿಭಾಗದಲ್ಲಿ ದೆರ್ವನ್, ರತ್ನಗಿರಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಪ್ರಮುಖ ಪಾತ್ರದಿಂದಾಗಿ ಮತ್ತು ಅತಿ ಹೆಚ್ಚು ಗೋಲು ಬಾರಿಸಿ ತಂಡವು ಟೂರ್ನಮೆಂಟ್ನಲ್ಲಿ ಟಾಪ್ ೩ ಸ್ಥಾನವನ್ನು ಕಾಯ್ದುಕೊಳ್ಳಲು ಸಹಾಯವಾಗಿದೆ.
ಮಾರ್ಚ್ 2025 ರಲ್ಲಿ ನಡೆದ AIFF (All india football federation youth league)ನಲ್ಲಿ ಭಾಗವಹಿಸಿ 3 ಸ್ಥಾನವನ್ನು ಪಡೆಯಲು ಸಹಾಯ ಮಾಡಿದ್ದಾರೆ. ಏಪ್ರಿಲ್ ನಲ್ಲಿ ಇಂಡೋನೇಶಿಯಾದಲ್ಲಿ ನಡೆದಂತಹ ಭಾರತಿ ಕಪ್ ಟೂರ್ನಮೆಂಟ್ ನಲ್ಲಿ ಅಂಡರ್ 15 ಫುಟ್ಬಾಲ್ ತಂಡದಲ್ಲಿ ಆಡಿ ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ.
ಸಮರ್ಥ್ ರೈ ಮೀರಾ-ಭಾಯಂದರದ ಕನಕಿಯಾ ಇಂಟರ್ನ್ಯಾಶನಲ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ. ಅವರು CFCI ಕ್ಲಬ್ನಲ್ಲಿ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದಾರೆ.
2011 ಜೂನ್ 21 ರಂದು ಮಂಗಳೂರಿನ ಮುಚ್ಚೂರು ಗ್ರಾಮದಲ್ಲಿ ಜನಿಸಿದ ಸಮರ್ಥ್ ರೈ ಮುಂಬಯಿ ನಿವಾಸಿಯಾಗಿದ್ದು ಮಿಂಜ ಮಂಜಲ್ತೋಡಿ ಪೊಸನಿಕೆ ಮನೆ ಚಂದ್ರಶೇಖರ್ ರೈ ಮತ್ತು ಮುಚ್ಚೂರು ಕಲ್ಕುಡೆ ಕೈದುಮಾರು ಗುತ್ತು ಕುಶಲ ರೈ ಅವರ ಪುತ್ರ.
ಸಮರ್ಥ್ ರೈ ಯವರಿಗೆ ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರಿಗೆ ಕ್ರೀಡಾ ಶ್ರೀ ಪ್ರಶಸ್ತಿ, (Best achiever) ಪ್ರಶಸ್ತಿ ಹಾಗೂ ಭೀಷ್ಮ ವಿಜಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.