ಮುಂಬೈ, ಆ. 23 (DaijiworldNews/TA): ಗಣೇಶೋತ್ಸವದ ಸಂಭ್ರಮದ ನಡುವೆ ಮುಂಬೈನ ಭುಲೇಶ್ವರ ಪ್ರದೇಶದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

ಭುಲೇಶ್ವರದ ಜೈ ಅಂಬೆ ಚೌಕ್ನ ಕಬುತರ್ಖಾನಾ ಬಳಿ ರಾತ್ರಿ ಸುಮಾರು 9.51ಕ್ಕೆ ‘ಭುಲೇಶ್ವರಚ ರಾಜ’ ಗಣೇಶ ಮೂರ್ತಿಯ ಆಗಮನ ಮೆರವಣಿಗೆ ವೇಳೆ 22 ಅಡಿ ಎತ್ತರದ ಬೃಹತ್ ಗಣೇಶ ವಿಗ್ರಹ ಏಕಾಏಕಿ ಕುಸಿದು ಭಕ್ತರ ಮೇಲೆ ಬಿದ್ದಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಪ್ರಕಾರ, ಮೆರವಣಿಗೆ ವಾಹನದಲ್ಲಿ ವಿಗ್ರಹವನ್ನು ಭದ್ರಪಡಿಸಿದ್ದ ಬೋಲ್ಟ್ಗಳಲ್ಲಿ ತಾಂತ್ರಿಕ ದೋಷ ಉಂಟಾಗಿರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ವಿಗ್ರಹ ಕುಸಿತದಿಂದ ಗಂಭೀರವಾಗಿ ಗಾಯಗೊಂಡ ಸಂಕೇತ್ ನೆವ್ಶೆ (33) ಮತ್ತು ಬ್ರಿಜೇಶ್ ಹೇಮಂತ್ ಜೋಶಿ (30) ಅವರನ್ನು ಜಿ.ಟಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಗಾಯಗೊಂಡ ಐವರ ಪೈಕಿ 5 ಮತ್ತು 7 ವರ್ಷದ ಇಬ್ಬರು ಬಾಲಕಿಯರು ಕೂಡ ಇದ್ದಾರೆ. ಗಾಯಾಳುಗಳಿಗೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.
ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆ ಮುಂಬೈ ಪೊಲೀಸರು, ಅಗ್ನಿಶಾಮಕ ದಳ, ಟ್ರಾಫಿಕ್ ಪೊಲೀಸರು ಹಾಗೂ 108 ತುರ್ತು ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಕುಸಿದ ವಿಗ್ರಹದ ಅವಶೇಷಗಳನ್ನು ತೆರವುಗೊಳಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಗಣೇಶೋತ್ಸವದ ಸಂಭ್ರಮದಲ್ಲಿ ನೂರಾರು ಭಕ್ತರು ಸೇರಿದ್ದ ಸ್ಥಳದಲ್ಲಿ ಬೃಹತ್ ವಿಗ್ರಹ ಏಕಾಏಕಿ ಕುಸಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಮುಂಬೈನಲ್ಲಿ ಗಣೇಶೋತ್ಸವದ ಆಗಮನ ಮೆರವಣಿಗೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಬೃಹತ್ ವಿಗ್ರಹಗಳ ಸುರಕ್ಷತೆ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. 20 ಅಡಿಗಿಂತ ಎತ್ತರದ ವಿಗ್ರಹಗಳನ್ನು ಸಾಗಿಸುವಾಗ ಟ್ರಕ್ ಮತ್ತು ಟ್ರಾಲಿಗಳ ಫಿಟ್ಟಿಂಗ್ಗಳು, ಬೋಲ್ಟ್ಗಳ ಬಿಗಿತ ಹಾಗೂ ಮಾರ್ಗದಲ್ಲಿರುವ ವಿದ್ಯುತ್ ತಂತಿಗಳ ಸುರಕ್ಷತೆಯನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಅಧಿಕಾರಿಗಳು ಈಗಾಗಲೇ ಸೂಚಿಸಿದ್ದಾರೆ. ಜನನಿಬಿಡ ಹಾಗೂ ಕಿರಿದಾದ ರಸ್ತೆಗಳಲ್ಲಿ ಬೃಹತ್ ವಿಗ್ರಹಗಳನ್ನು ಸಾಗಿಸುವ ಮುನ್ನ ಮೆರವಣಿಗೆ ವಾಹನದ ಸಾಮರ್ಥ್ಯ ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ನುರಿತ ತಜ್ಞರಿಂದ ಪರಿಶೀಲಿಸಿ ಪ್ರಮಾಣೀಕರಿಸಿಕೊಳ್ಳಬೇಕು ಎಂದು ಆಯೋಜಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.