ಬೆಂಗಳೂರು, ಆ. 22 (DaijiworldNews/AK):ಸಿಕ್ಕ ಸಿಕ್ಕ ಕಡೆಯಲ್ಲಿ ಲೂಟಿ ಮಾಡುವ ಕಾಂಗ್ರೆಸ್ ಭ್ರಷ್ಟಾಚಾರ ಮಾಡದೆ ಬದುಕುವುದೇ ಇಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಾಗೂ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಅಧಿಕಾರಿಗಳು ಲೂಟಿ ಮಾಡಲು ಸರ್ಕಾರವೇ ಅವಕಾಶ ನೀಡುತ್ತಿದೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ತಾಂಡವವಾಡುತ್ತಿದೆ. ವಾಲ್ಮೀಕಿ ನಿಗಮದಿಂದ ಆರಂಭವಾಗಿ ಬೆಂಗಳೂರು ರಸ್ತೆ ಗುಂಡಿಗಳನ್ನ ತುಂಬಲು ಲಕ್ಷಾಂತರ ಕೋಟಿವರೆಗೆ ಲೂಟಿ ನಡೆಯುತ್ತಿದೆ. ಕಸದಲ್ಲೀ ಕಂಟ್ರಾಕ್ಟರ್ ಲೂಟಿ ಮಾಡ್ತ ಇದ್ದಾರೆ. ಐವತ್ತು ಕೋಟಿ ಅರವತ್ತು ಕೋಟಿಯನ್ನು ಅವರದೇ ಕಂಪನಿಗಳಿಗೆ ಹಾಕಿಕೊಂಡಿದ್ದಾರೆ ಎಂದರು. ಲೂಟಿ ಬಗ್ಗೆ ನಾವು ಪ್ರಸ್ತಾಪ ಮಾಡಿದರೂ ಇವರು ಕೇಳುವುದಿಲ್ಲ ಎಂದು ನುಡಿದರು.
ಬೇಲ್ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಲ್ಲ
ಸಚಿವ ನಾಗೇಂದ್ರ ವಿರುದ್ಧ ಸದನದಲ್ಲಿ ಹೋರಾಟ ಮಾಡ್ತ ಇದ್ದೇವೆ. ನಾಗೇಂದ್ರ ರಾಜೀನಾಮೆವರೆಗೆ ನಾವು ಹೋರಾಟ ಕೈ ಬಿಡುವುದಿಲ್ಲ. ನಾಗೇಂದ್ರ ಕೈ ಬಿಡಲ್ಲ ಎಂದು ಸರ್ಕಾರ ಹಠಕ್ಕೆ ಬಿದ್ದಿದೆ. ಅವರಿಗೆ ಬೇಲ್ ಸಿಕ್ಕಿದೆ ಅಂತೆ ಬೇಲ್ ಎಂದರೆ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಲ್ಲ.
ಅವರಿಗೆ ಕ್ಲೀನ್ ಚಿಟ್ ಸಿಕ್ಕಿಲ್ಲ. ಅವರು ಕಾಂಗ್ರೆಸ್ ಅನ್ನು ಬ್ಲಾಕ್ ಮೇಲ್ ಮಾಡಿದ್ದಕ್ಕೆ ಸಚಿವರಾಗಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಹೆಸರು ಹೇಳಿಬಿಡ್ತಾರೆ ಎಂದು ಸಚಿವರಾಗಿ ಮಾಡಿದ್ದಾರೆ ಎಂದರು.
ನಮ್ಮ ಹೋರಾಟದ ಬಿಸಿ ಹೇಗಿದೆ ಎಂದರೆ ಬಿಲದಲ್ಲಿ ಇರುವವರು ಈಗ ಹೊರ ಬಂದಿದ್ದಾರೆ. ಭ್ರಷ್ಟಾಚಾರಿಗಳು ಈಗ ಗಾಂಧಿ ಪ್ರತಿಮೆ ಮುಂದೆ ಬಂದಿದ್ದಾರೆ ಎಂದರು.
ದಲಿತರ ಮೇಲೆ ದೌರ್ಜನ್ಯ, ಜಾತಿ ನಿಂದನೆ ಹೆಚ್ಚಿದೆ. ದಲಿತರ ರಕ್ಷಣೆಗೆ ಸರ್ಕಾರ ಬಂದಿಲ್ಲ. ದೇವದುರ್ಗ ದಲಿತ ಅನ್ನೋ ಕಾರಣಕ್ಕೆ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಅತ್ಯಾಚಾರ ಕೊಲೆ ಮಾಡುತ್ತಿದ್ದಾರೆ. ಗೃಹ ಇಲಾಖೆ ಕಣ್ಣು ಮುಚ್ಚಿ ಕೂತಿದೆ. ದಲಿತರ ರಕ್ಷಿಸದ ಸರ್ಕಾರ ಏನೂ ಮಾಡುತ್ತಿಲ್ಲ. ಗೃಹ ಸಚಿವರು ಬೆಳಗಾದರೆ ಆರ್ ಎಸ್ ಎಸ್ ಸಚಿವರಾಗಿದ್ದಾರೆ ಎಂದು ವ್ಯಂಗವಾಡಿದರು.
ನಾಗೇಂದ್ರ ವಿಷಯದ ಕುರಿತು ಚರ್ಚೆಗೆ ಬನ್ನಿ ಎಂದು ಸರ್ಕಾರ ಹೇಳುತ್ತಿದೆ. ಭ್ರಷ್ಟಾಚಾರ ಆಗಿದ್ದು ಸರ್ಕಾರ ಹಿಂದೆ ಒಪ್ಪಿಕೊಂಡಿದೆ. ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ. ಅವರು ಈಗಲೂ ದೋಷಿ. ಮತ್ತೆ ಯಾಕೆ ಸಚಿವರಾಗಿ ಮಾಡಿದಿರಿ ಎಂದು ಪ್ರಶ್ನಿಸಿದರು.