ಕಣ್ಣೂರು, ಆ. 22 (DaijiworldNews/AK): ಮದುವೆಯ ಸಂಭ್ರಮದಲ್ಲಿದ್ದ ವೈದ್ಯೆಯೊಬ್ಬರು ತಮ್ಮ ವೈಯಕ್ತಿಕ ಕ್ಷಣಗಳನ್ನು ಬದಿಗಿಟ್ಟು, ಶುಭಸಮಾರಂಭದಲ್ಲಿ ಅಸ್ವಸ್ಥಗೊಂಡ ಇಬ್ಬರು ಕೇಟರಿಂಗ್ ಮಹಿಳಾ ಸಿಬ್ಬಂದಿಗೆ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಣ್ಣೂರಿನ ಪನೂರ್ ಮೂಲದ ಡಾ. ಶೀರಿನ್ ಸುಬೈರ್ ಮತ್ತು ಡಾ. ರಿಜಾಜ್ ಅವರ ವಿವಾಹ ಸಮಾರಂಭದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ.
ಮದುವೆ ಕಾರ್ಯಕ್ರಮದ ವೇಳೆ ಆಹಾರ ಸರಬರಾಜು ಮಾಡುತ್ತಿದ್ದ ಇಬ್ಬರು ಕೇಟರಿಂಗ್ ಮಹಿಳೆಯರಲ್ಲಿ ಒಬ್ಬರಿಗೆ ಮೂಗಿನಿಂದ ತೀವ್ರ ರಕ್ತಸ್ರಾವ ಕಾಣಿಸಿಕೊಂಡರೆ, ಮತ್ತೊಬ್ಬರು ತಲೆಸುತ್ತು ಬಂದು ಕುಸಿದುಬಿದ್ದರು. ಶೀರಿನ್ ವೈದ್ಯೆ ಎಂಬುದು ತಿಳಿದಿದ್ದ ಆಪ್ತರು ತಕ್ಷಣವೇ ವಧುವಿನ ಉಡುಪಿನಲ್ಲಿದ್ದ ಅವರ ಬಳಿ ಸಹಾಯ ಕೇಳಿದರು. ಕ್ಷಣವೂ ತಡಮಾಡದ ಶೀರಿನ್, ಮದುವೆ ಮಂಟಪದಲ್ಲೇ ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿದರು.
ಮೂಗಿನ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಗೆ ಮುಂದೆ ಬಾಗಿ, 10-15 ನಿಮಿಷಗಳ ಕಾಲ ಮೂಗನ್ನು ಗಟ್ಟಿಯಾಗಿ ಹಿಡಿದುಕೊಂಡು ಬಾಯಿಯಿಂದ ಉಸಿರಾಡಲು ಸೂಚಿಸಿದರು. ತಲೆಸುತ್ತು ಬಂದಿದ್ದ ಮಹಿಳೆಗೆ ಕಾಲುಗಳನ್ನು ಮೇಲಕ್ಕೆತ್ತಿ ಮಲಗುವಂತೆ ಮಾಡಿ ಚಿಕಿತ್ಸೆ ನೀಡಿದರು. ಆಟೋಮ್ಯಾಟಿಕ್ ಆಗಿ ಕ್ಯಾಮೆರಾದಲ್ಲಿ ಸೆರೆಯಾದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶೀರಿನ್ ಅವರು ಒಟ್ಟಾಪಾಲಂನ ವಳ್ಳುವನಾಡ್ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ಪ್ರಥಮ ವರ್ಷದ ಎಂಡಿ ವ್ಯಾಸಂಗ ಮಾಡುತ್ತಿದ್ದಾರೆ.
ಪ್ರತಿಯೊಬ್ಬರಿಗೂ ಮೂಲಭೂತ ಪ್ರಥಮ ಚಿಕಿತ್ಸೆ ಹಾಗೂ ಸಿಪಿಆರ್ ಜ್ಞಾನವಿರಬೇಕಾದ ಅಗತ್ಯತೆಯನ್ನು ಅವರು ಈ ವೇಳೆ ಪ್ರತಿಪಾದಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಆರ್ಥೋಪೆಡಿಕ್ಸ್ ವಿಭಾಗದಲ್ಲಿ ಪಿಜಿ ಮಾಡುತ್ತಿರುವ ಅವರ ಪತಿ ಡಾ. ರಿಜಾಜ್ ಕೂಡ ಹೆಂಡತಿಯ ಈ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ