ನವದೆಹಲಿ, ಜು. 22 (DaijiworldNews/AA): ಕೇಂದ್ರ ಸರ್ಕಾರ ನಮ್ಮನ್ನ ಸಂಪರ್ಕಿಸುತ್ತಿದೆ, ಒಂದು ವೇಳೆ ಸರ್ಕಾರ ಮಾತುಕತೆ ನಡೆಸಲು ಮುಂದಾದ್ರೆ ನಾವು ಸಂಪೂರ್ಣ ಸಿದ್ಧ ಎಂದು ಜಂತರ್ ಮಂತರ್ನಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, "ಮಾತುಕತೆ ಜಂತರ್ ಮಂತರ್ನಲ್ಲೇ ನಡೆಯಬಹುದು ಅಥವಾ ಉಭಯಪಕ್ಷಗಳು ಒಪ್ಪುವ ತಟಸ್ಥ ಸ್ಥಳದಲ್ಲೂ ನಡೆಸಬಹುದು. ಈ ಬಾರಿ ಸಮಯ ವ್ಯರ್ಥವಾಗುವುದಿಲ್ಲ. ನಮ್ಮ 4 ಪ್ರಮುಖ ಬೇಡಿಕೆಗಳ ಕುರಿತು ಸ್ಪಷ್ಟ ನಿರ್ಧಾರ ಬೇಕು" ಎಂದಿದ್ದಾರೆ.
"ಇದೇ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಲು ಅಭಿಜಿತ್ ದೀಪ್ಕೆ ಮತ್ತೆ ಜಂತರ್ ಮಂತರ್ಗೆ ಆಗಮಿಸಿದ್ದು, ಅಶುತೋಷ್ ರಾಂಕಾ ಅಲ್ಲಿಂದ ತೆರಳಿದ್ದಾರೆ. ಶೀಘ್ರದಲ್ಲೇ ಗೊತ್ತುಪಡಿಸಿದ ಸ್ಥಳದಲ್ಲಿ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವೆ ಮಾತುಕತೆ ನಡೆಯುವ ಸಾಧ್ಯತೆ ಇದೆ" ಎಂದು ಸಿಜೆಪಿ ವಕ್ತಾರ ಸೌರಭ್ ದಾಸ್ ಹೇಳಿದ್ದಾರೆ.
"ಇನ್ನೊಂದೆಡೆ, ಲೋಕಸಭೆಯಲ್ಲೂ ಈ ವಿಚಾರ ಪ್ರತಿಧ್ವನಿಸಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ಯಾವ ನಿಯಮದಡಿ, ಯಾವ ದಿನ ಹಾಗೂ ಎಷ್ಟು ಅವಧಿಗೆ ಚರ್ಚೆ ನಡೆಸಬೇಕು ಎಂಬುದನ್ನು ಸ್ಪೀಕರ್ ಓಂ ಬಿರ್ಲಾ ಸರ್ವ ಪಕ್ಷಗಳ ಸಭೆ ನಡೆಸಿ ನಿರ್ಧರಿಸಲಿದ್ದಾರೆ" ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ.