ಡೆಹ್ರಾಡೂನ್, ಜು. 20 (DaijiworldNews/AA): ನಿರಂತರ ಮಳೆ, ಹವಾಮಾನ ಎಚ್ಚರಿಕೆ ಮತ್ತು ಭೂಕುಸಿತದಿಂದಾಗಿ ಉತ್ತರಾಖಂಡ ರಾಜ್ಯಾದ್ಯಂತ ತೀರ್ಥಯಾತ್ರೆ ಮಾರ್ಗಗಳಲ್ಲಿ ಅಡ್ಡಿ ಉಂಟಾಗಿದ್ದರಿಂದ ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರ ಸೋಮವಾರ ತಿಳಿಸಿದೆ.

"ಭಾರತ ಹವಾಮಾನ ಇಲಾಖೆ ರೆಡ್ ಮತ್ತು ಆರೆಂಜ್ ಅಲರ್ಟ್ ನೀಡಿದ್ದು, ಹಿಮಾಲಯದ ದೇವಾಲಯಗಳಿಗೆ ಹೋಗುವ ಮಾರ್ಗಗಳಲ್ಲಿ ಹಲವಾರು ಸ್ಥಳಗಳಲ್ಲಿ ಭೂಕುಸಿತಗಳು ವರದಿಯಾದ ನಂತರ ಈ ಮುನ್ನೆಚ್ಚರಿಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಹವಾಮಾನ ಮತ್ತು ರಸ್ತೆ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ, ಯಾತ್ರಿಕರ ಸುರಕ್ಷತೆ ನಮ್ಮ ಹೆಚ್ಚಿನ ಆದ್ಯತೆಯಾಗಿದೆ" ಎಂದು ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.
"ಮಾರ್ಗಗಳು ಸುರಕ್ಷಿತವೆಂದು ಘೋಷಿಸಲ್ಪಟ್ಟ ನಂತರ ಮತ್ತು ಪರಿಸ್ಥಿತಿಗಳು ಸಾಮಾನ್ಯ ಸ್ಥಿತಿಗೆ ಮರಳಿದ ನಂತರವೇ ಇದು ಪುನರಾರಂಭಗೊಳ್ಳುತ್ತದೆ. ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಮಾರ್ಗಗಳಲ್ಲಿನ ಯಾತ್ರಿಕರ ಸಂಚಾರಕ್ಕೆ ಅಮಾನತು ಅನ್ವಯಿಸುತ್ತದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಗಗಳಲ್ಲಿ ಈಗಾಗಲೇ ಇರುವ ಯಾತ್ರಾರ್ಥಿಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಸ್ಥಳಾವಕಾಶ ಕಲ್ಪಿಸಬೇಕು. ರಸ್ತೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ತೆರವುಗೊಳಿಸುವವರೆಗೆ ಮುಂದಿನ ಸಂಚಾರಕ್ಕೆ ಅವಕಾಶ ನೀಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
"ಯಾತ್ರಿಕರು ವದಂತಿಗಳಿಗೆ ಕಿವಿಗೊಡಬಾರದು. ಹವಾಮಾನ ಮತ್ತು ರಸ್ತೆ ಪರಿಸ್ಥಿತಿಗಳು ಸುಧಾರಿಸುವವರೆಗೆ ಅವರು ಅಧಿಕೃತ ಸಲಹೆಗಳನ್ನು ಮಾತ್ರ ಅವಲಂಬಿಸಬೇಕು ಮತ್ತು ಜಿಲ್ಲಾಡಳಿತದ ನಿರ್ದೇಶನಗಳನ್ನು ಪಾಲಿಸಬೇಕು" ಎಂದು ವಕ್ತಾರರು ಹೇಳಿದ್ದಾರೆ.