ಕೊಲ್ಲಂ, ಜು. 20 (DaijiworldNews/TA): ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ತನ್ನ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲು ಮುಂದಾಗಿದೆ. ಇನ್ನು ಮುಂದೆ ನೌಕರರ ಸೇವೆಯನ್ನು ಗುರಿ ಆಧಾರಿತವಾಗಿ ಮೌಲ್ಯಮಾಪನ ಮಾಡಲಾಗಲಿದ್ದು, ಪ್ರತಿ ತಿಂಗಳು ರಾಜ್ಯದ ಅತ್ಯುತ್ತಮ ಚಾಲಕ ಹಾಗೂ ನಿರ್ವಾಹಕರನ್ನು (ಕಂಡಕ್ಟರ್) ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.

ಹೊಸ ವ್ಯವಸ್ಥೆಯ ಪ್ರಕಾರ, ಪ್ರತಿಯೊಂದು ಡಿಪೋದಲ್ಲೂ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ ಚಾಲಕರು ಮತ್ತು ನಿರ್ವಾಹಕರನ್ನು ಮೊದಲಿಗೆ ಗುರುತಿಸಲಾಗುತ್ತದೆ. ಬಳಿಕ ಅವರ ಪೈಕಿ ರಾಜ್ಯಮಟ್ಟದ ಅತ್ಯುತ್ತಮ ಚಾಲಕ ಮತ್ತು ನಿರ್ವಾಹಕರನ್ನು ಆಯ್ಕೆ ಮಾಡಲಾಗುತ್ತದೆ. ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಘಟಕ ಅಧಿಕಾರಿ ಅಧ್ಯಕ್ಷರಾಗಿರುವ ಐದು ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ನಿಗಮ ನಿಗದಿಪಡಿಸಿರುವ ಮಾನದಂಡಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ.
ನಿರ್ವಾಹಕರಿಗೆ ಒಟ್ಟು 100 ಅಂಕಗಳ ಮೌಲ್ಯಮಾಪನ ವ್ಯವಸ್ಥೆ ರೂಪಿಸಲಾಗಿದೆ. ಪ್ರತಿ ಟ್ರಿಪ್ಗೆ ನಿಗದಿಪಡಿಸಿದ ಆದಾಯ ಗುರಿಯನ್ನು ಶೇ.100ರಷ್ಟು ಸಾಧಿಸಿದರೆ 60 ಅಂಕಗಳು ಲಭಿಸಲಿವೆ. ದೈನಂದಿನ ಹಾಜರಾತಿಗೆ 15 ಅಂಕ, ಸಮಯಪಾಲನೆಗೆ 15 ಅಂಕ ಹಾಗೂ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದಕ್ಕೆ 10 ಅಂಕಗಳನ್ನು ನೀಡಲಾಗುತ್ತದೆ.
ಚಾಲಕರ ಮೌಲ್ಯಮಾಪನದಲ್ಲೂ ಒಟ್ಟು 100 ಅಂಕಗಳ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಇಂಧನ ದಕ್ಷತೆಯೇ ಪ್ರಮುಖ ಮಾನದಂಡವಾಗಿದ್ದು, ಪ್ರತಿ ಮಾರ್ಗಕ್ಕೆ ನಿಗದಿಪಡಿಸಿರುವ ಕಿಲೋಮೀಟರ್ ಪ್ರತಿ ಲೀಟರ್ (KMPL) ಗುರಿ ಸಾಧನೆಗೆ 60 ಅಂಕಗಳು ನೀಡಲಾಗುತ್ತದೆ. ಸುರಕ್ಷಿತ ಚಾಲನೆಗೆ 20 ಅಂಕ, ಹಾಜರಾತಿ ಮತ್ತು ಸಮಯಪಾಲನೆಗೆ 15 ಅಂಕ ಹಾಗೂ ಶಿಸ್ತಿನ ಪಾಲನೆಗೆ 5 ಅಂಕಗಳನ್ನು ನಿಗದಿಪಡಿಸಲಾಗಿದೆ.
ಪ್ರತಿ ಡಿಪೋದಿಂದ ಅತ್ಯುತ್ತಮ 10 ಚಾಲಕರು ಮತ್ತು 10 ನಿರ್ವಾಹಕರನ್ನು ಗುರುತಿಸಿ ಸ್ಥಳೀಯ ಮಟ್ಟದಲ್ಲಿ ಸನ್ಮಾನಿಸಲಾಗುತ್ತದೆ. ಬಳಿಕ ಅವರಲ್ಲಿ ತಲಾ ಮೂವರ ಹೆಸರನ್ನು ರಾಜ್ಯಮಟ್ಟದ ಅಂತಿಮ ಆಯ್ಕೆಗಾಗಿ ಕೆಎಸ್ಆರ್ಟಿಸಿಯ ಮಾನವ ಸಂಪನ್ಮೂಲ ಇಲಾಖೆಗೆ ಕಳುಹಿಸಲಾಗುತ್ತದೆ. ಆದರೆ, ಉತ್ತಮ ಕಾರ್ಯಕ್ಷಮತೆ ತೋರಿದರೂ ಚಾಲಕರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಅಥವಾ ಕೆಎಸ್ಆರ್ಟಿಸಿ ವಿಜಿಲೆನ್ಸ್ ವಿಭಾಗ ದೃಢೀಕರಿಸಿರುವ ಗಂಭೀರ ದೂರುಗಳು ದಾಖಲಾಗಿದ್ದರೆ ಅಂತಹ ಸಿಬ್ಬಂದಿಗೆ ಪ್ರಶಸ್ತಿ ನೀಡಲಾಗುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
ಈ ಹಿಂದೆ ಉತ್ತಮ ಇಂಧನ ದಕ್ಷತೆ ಸಾಧಿಸಿದ ಚಾಲಕರನ್ನು ಗೌರವಿಸುವ ಯೋಜನೆ ಜಾರಿಯಲ್ಲಿದ್ದರೂ ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿರಲಿಲ್ಲ. ಇದೀಗ ಸರ್ಕಾರದ 'ನೂರಿನಾ ಕರ್ಮ' ಯೋಜನೆಯೊಂದಿಗೆ ಹೊಸ ಕಾರ್ಯಕ್ಷಮತಾ ಮೌಲ್ಯಮಾಪನ ವ್ಯವಸ್ಥೆಯನ್ನು ಜೋಡಿಸಲಾಗಿದ್ದು, ಸಿಬ್ಬಂದಿಯಲ್ಲಿ ಆರೋಗ್ಯಕರ ಸ್ಪರ್ಧೆ ಬೆಳೆಸುವುದು ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಗುಣಮಟ್ಟದ ಸೇವೆ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಜುಲೈ ತಿಂಗಳ ಕಾರ್ಯಕ್ಷಮತಾ ವರದಿಯನ್ನು ಮುಂದಿನ ತಿಂಗಳ 5ನೇ ತಾರೀಕಿನೊಳಗೆ ಸಲ್ಲಿಸುವಂತೆ ಕೆಎಸ್ಆರ್ಟಿಸಿ ಎಲ್ಲ ಡಿಪೋಗಳಿಗೆ ಸೂಚನೆ ನೀಡಿದ್ದು, ಈ ಹೊಸ ವ್ಯವಸ್ಥೆಯಿಂದ ನಿಗಮದ ಸೇವೆಯ ಗುಣಮಟ್ಟ ಹಾಗೂ ಆದಾಯ ಎರಡೂ ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿದೆ.