ನವದೆಹಲಿ, ಜು. 19(DaijiworldNews/TA): ಒಂದೆರಡು ಬಾರಿ ಸೋತರೆ ಸಾಕು, ಅನೇಕರು ತಮ್ಮ ಕನಸನ್ನೇ ಕೈಬಿಡುತ್ತಾರೆ. ಆದರೆ ಹರಿಯಾಣದ ಸಿರ್ಸಾ ಜಿಲ್ಲೆಯ ವಿಜಯ್ ವರ್ಧನ್ ಅವರು ಬರೋಬ್ಬರಿ 35 ಸರ್ಕಾರಿ ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದರೂ ತಮ್ಮ ಗುರಿಯಿಂದ ಹಿಂದೆ ಸರಿಯಲಿಲ್ಲ. ನಿರಂತರ ಪರಿಶ್ರಮದ ಫಲವಾಗಿ ಅವರು ಮೊದಲು ಐಪಿಎಸ್ ಅಧಿಕಾರಿಯಾಗಿ, ಬಳಿಕ ಐಎಎಸ್ ಅಧಿಕಾರಿಯಾಗಿ ದೇಶದ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.

ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದ ವಿಜಯ್ ವರ್ಧನ್, ಭಾರತೀಯ ಆಡಳಿತ ಸೇವೆ ಸೇರುವ ಕನಸಿನೊಂದಿಗೆ ದೆಹಲಿಗೆ ತೆರಳಿ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಆರಂಭಿಸಿದರು. ಯುಪಿಎಸ್ಸಿ ಜೊತೆಗೆ ಹರಿಯಾಣ ಲೋಕಸೇವಾ ಆಯೋಗ, ಉತ್ತರ ಪ್ರದೇಶ ಲೋಕಸೇವಾ ಆಯೋಗ, ಸಿಬ್ಬಂದಿ ಆಯ್ಕೆ ಆಯೋಗ ಸೇರಿದಂತೆ ಹಲವು ಸರ್ಕಾರಿ ನೇಮಕಾತಿ ಪರೀಕ್ಷೆಗಳನ್ನೂ ಬರೆದರು. ಆದರೆ ಒಂದರ ಹಿಂದೆ ಒಂದರಂತೆ ಒಟ್ಟು 35 ಪರೀಕ್ಷೆಗಳಲ್ಲಿ ಸೋಲು ಎದುರಿಸಬೇಕಾಯಿತು.
ಪದೇ ಪದೇ ವೈಫಲ್ಯ ಎದುರಾದರೂ ಅವರು ಹತಾಶರಾಗಲಿಲ್ಲ. ಪ್ರತಿಯೊಂದು ಪರೀಕ್ಷೆಯ ಬಳಿಕ ತಮ್ಮ ತಪ್ಪುಗಳನ್ನು ವಿಶ್ಲೇಷಿಸಿ, ಓದುವ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡು ಮತ್ತಷ್ಟು ಶ್ರಮಿಸಿದರು. ಇದೇ ಅವರ ಯಶಸ್ಸಿನ ಪ್ರಮುಖ ಕಾರಣವಾಯಿತು. ವರ್ಷಗಳ ಪರಿಶ್ರಮಕ್ಕೆ 2018ರಲ್ಲಿ ಫಲ ಸಿಕ್ಕಿತು. ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ 104ನೇ ರ್ಯಾಂಕ್ (AIR-104) ಗಳಿಸಿದ ಅವರು ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾದರು. ಆದರೆ ಅವರ ಕನಸು ಅಲ್ಲೇ ಮುಗಿಯಲಿಲ್ಲ. ಅಂತಿಮ ಗುರಿಯಾಗಿದ್ದ ಐಎಎಸ್ ಹುದ್ದೆಗಾಗಿ ಮತ್ತೆ ತಯಾರಿ ಮುಂದುವರಿಸಿದರು.
ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಲೇ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ ವಿಜಯ್ ವರ್ಧನ್, 2021ರಲ್ಲಿ ಮತ್ತೊಮ್ಮೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. 2021ರ ಬ್ಯಾಚ್ನ ಹಿಮಾಚಲ ಪ್ರದೇಶ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ ವಿಜಯ್ ವರ್ಧನ್, ಈ ಹಿಂದೆ ರೋಹ್ರುವಿನ ಉಪ ವಿಭಾಗಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಅವರು ಹಿಮಾಚಲ ಪ್ರದೇಶ ಸರ್ಕಾರದ ಸಾರ್ವಜನಿಕ ಹಣಕಾಸು ಮತ್ತು ಸಾರ್ವಜನಿಕ ಉದ್ಯಮಗಳ ನಿರ್ದೇಶಕರಾಗಿ (ವಿಶೇಷ ಕಾರ್ಯದರ್ಶಿ - ಹಣಕಾಸು) ಶಿಮ್ಲಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಖಜಾನೆಗಳು, ಲೆಕ್ಕಪತ್ರಗಳು ಮತ್ತು ಲಾಟರಿಗಳ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ. ವಿಜಯ್ ವರ್ಧನ್ ಹಲವು ಸಂದರ್ಶನಗಳಲ್ಲಿ, "ವೈಫಲ್ಯವೇ ಅಂತ್ಯವಲ್ಲ. ಪ್ರತಿಯೊಂದು ಸೋಲಿನಿಂದ ಪಾಠ ಕಲಿತು ಮತ್ತೆ ಪ್ರಯತ್ನಿಸುವುದೇ ಯಶಸ್ಸಿನ ಗುಟ್ಟು" ಎಂದು ಹೇಳಿಕೊಂಡಿದ್ದಾರೆ. 35 ಪರೀಕ್ಷೆಗಳಲ್ಲಿ ಸೋತ ಬಳಿಕವೂ ಛಲ ಬಿಡದೆ ಐಎಎಸ್ ಅಧಿಕಾರಿಯಾಗಿರುವ ವಿಜಯ್ ವರ್ಧನ್ ಅವರ ಕಥೆ, ಕನಸುಗಳಿಗಾಗಿ ಶ್ರಮಿಸುವ ಪ್ರತಿಯೊಬ್ಬ ಯುವಕ-ಯುವತಿಯರಿಗೂ ಪ್ರೇರಣೆಯಾಗಿದೆ.