ನವದೆಹಲಿ, ಜು. 12 (DaijiworldNews/AA): ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್ಸಿಆರ್ಎ)ಗೆ ಸಂಬಂಧಿಸಿದ ಹೊಸ ಮಸೂದೆಯನ್ನು ಹಿಂದಿನ ದಿನಾಂಕದಿಂದ ಜಾರಿಗೆ ತರಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿರಿಯ ಚರ್ಚ್ ಮುಖಂಡರ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಈ ಭರವಸೆಯಿಂದ ವಿದೇಶಿ ಅನುದಾನದ ನೋಂದಣಿಗಳ ಬಗ್ಗೆ ಆತಂಕದಲ್ಲಿದ್ದ ಸರ್ಕಾರೇತರ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳು ನಿಟ್ಟುಸಿರು ಬಿಡುವಂತಾಗಿದೆ.

ನೂತನ ಎಫ್ಸಿಆರ್ಎ ಕಾಯ್ದೆಯ ಕರಡು ತಿದ್ದುಪಡಿಗಳ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದ ಕ್ರೈಸ್ತ ಸಮುದಾಯದ ಮುಖಂಡರು ಆತಂಕ ವ್ಯಕ್ತಪಡಿಸಿದ್ದರು. ಹೊಸ ನಿಯಮಗಳನ್ನು ಹಿಂದಿನ ದಿನಾಂಕದಿಂದ ಅನ್ವಯಿಸಿ ನೋಂದಣಿಗಳನ್ನು ರದ್ದುಗೊಳಿಸುವ ಅಥವಾ ಮರುಪರಿಶೀಲನೆ ನಡೆಸುವ ಕ್ರಮ ಕೈಗೊಂಡರೆ ದೇಶಾದ್ಯಂತ ನಡೆಯುತ್ತಿರುವ ಶಿಕ್ಷಣ, ಸಾಮಾಜಿಕ ಕಲ್ಯಾಣ ಹಾಗೂ ಸೇವಾ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, "ಹೊಸ ಕಾನೂನು ಕ್ರಮಗಳ ಉದ್ದೇಶ ಭವಿಷ್ಯದಲ್ಲಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವುದು ಹಾಗೂ ಹಣಕಾಸಿನ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವುದೇ ಹೊರತು, ಈಗಾಗಲೇ ನಿಯಮಾನುಸಾರ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಶಿಕ್ಷೆ ವಿಧಿಸುವುದಲ್ಲ" ಎಂದು ಸ್ಪಷ್ಟಪಡಿಸಿದರು.
"ಜಾರಿಯಲ್ಲಿರುವ ಕಾನೂನುಗಳ ಅನುಸಾರ ಕಾರ್ಯನಿರ್ವಹಿಸುತ್ತಿರುವ ಹಾಗೂ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಸ್ವಚ್ಛ ದಾಖಲೆಗಳನ್ನು ಕಾಯ್ದುಕೊಂಡಿರುವ ಸಂಸ್ಥೆಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ" ಎಂದು ಮಾಹಿತಿ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಚರ್ಚ್ ಮುಖಂಡರು, ಸರ್ಕಾರದೊಂದಿಗೆ ನಡೆದ ಈ ಸಕಾರಾತ್ಮಕ ಸಂವಾದವನ್ನು ಸ್ವಾಗತಿಸಿದರು. ವಿಶೇಷವಾಗಿ, ಹೊಸ ಎಫ್ಸಿಆರ್ಎ ಮಸೂದೆ ಹಿಂದಿನ ದಿನಾಂಕದಿಂದ ಜಾರಿಗೆ ಬರುವುದಿಲ್ಲ ಎಂಬ ಸ್ಪಷ್ಟ ಭರವಸೆಯಿಂದ ಇತ್ತೀಚಿನ ದಿನಗಳಲ್ಲಿ ಉಂಟಾಗಿದ್ದ ಅನಿಶ್ಚಿತತೆ ದೂರವಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ, ಕೇಂದ್ರ ಗೃಹ ಸಚಿವಾಲಯವು ತನ್ನ ನಿಲುವನ್ನು ಪುನರುಚ್ಚರಿಸಿದ್ದು, ಹೊಸ ತಿದ್ದುಪಡಿಗಳ ಉದ್ದೇಶ ವಿದೇಶಿ ನಿಧಿಗಳ ಅನಧಿಕೃತ ಬಳಕೆಯನ್ನು ತಡೆಯುವುದಷ್ಟೇ ಆಗಿದ್ದು, ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಮಾನವೀಯ ಹಾಗೂ ಸೇವಾ ಸಂಸ್ಥೆಗಳ ಚಟುವಟಿಕೆಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.