ನವದೆಹಲಿ, ಜು. 12 (DaijiworldNews/TA): ಭಾರತೀಯ ಚಿತ್ರರಂಗದ ಗಾನಕೋಗಿಲೆ ಎಸ್. ಜಾನಕಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ, ಭಾರತೀಯ ಸಂಗೀತ ಲೋಕಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂದೇಶದಲ್ಲಿ, "ಎಸ್. ಜಾನಕಿ ಅಮ್ಮ ಅವರ ನಿಧನ ಸಂಗೀತ ಮತ್ತು ಸಂಸ್ಕೃತಿ ಲೋಕಕ್ಕೆ ತುಂಬಲಾರದ ನಷ್ಟ. ಹಲವು ಭಾಷೆಗಳಲ್ಲಿ ಅವರು ಹಾಡಿದ ಗೀತೆಗಳು ತಲೆಮಾರುಗಳ ಮನಸ್ಸನ್ನು ಗೆದ್ದಿವೆ. ಪ್ರತಿಯೊಂದು ಭಾವನೆಗೂ ತಮ್ಮ ಧ್ವನಿಯ ಮೂಲಕ ಜೀವ ತುಂಬಿದ್ದರು. ಅವರ ಹಾಡುಗಳು ಮುಂದಿನ ಪೀಳಿಗೆಯನ್ನೂ ಮೋಡಿ ಮಾಡುತ್ತಲೇ ಇರುತ್ತವೆ. ಅವರ ಕುಟುಂಬ, ಅಭಿಮಾನಿಗಳು ಹಾಗೂ ಸಂಗೀತ ಲೋಕದ ಎಲ್ಲರಿಗೂ ನನ್ನ ಸಂತಾಪ. ಓಂ ಶಾಂತಿ," ಎಂದು ಬರೆದಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಸಂತಾಪ ಸಂದೇಶದಲ್ಲಿ, "ಎಸ್. ಜಾನಕಿ ಅವರ ಅಗಲಿಕೆಯಿಂದ ಭಾರತ ಸಂಗೀತ ಲೋಕದ ಅಮೂಲ್ಯ ಧ್ವನಿಯೊಂದನ್ನು ಕಳೆದುಕೊಂಡಿದೆ. ಆರು ದಶಕಗಳಿಗೂ ಅಧಿಕ ಕಾಲದ ಸಂಗೀತ ಪಯಣದಲ್ಲಿ ಸುಮಾರು 20 ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ ಅವರು ಹಲವು ತಲೆಮಾರುಗಳ ಸಂಗೀತಾಸಕ್ತರನ್ನು ರಂಜಿಸಿದ್ದಾರೆ. ಅವರ ಅಮೋಘ ಗಾಯನ ಸದಾ ನೆನಪಿನಲ್ಲಿ ಉಳಿಯಲಿದೆ. ಅವರ ಕುಟುಂಬ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ನನ್ನ ಸಂತಾಪ," ಎಂದು ತಿಳಿಸಿದ್ದಾರೆ.
ಎಸ್. ಜಾನಕಿ ಅವರ ನಿಧನಕ್ಕೆ ದೇಶದ ರಾಜಕೀಯ, ಸಿನಿಮಾ ಹಾಗೂ ಸಂಗೀತ ಕ್ಷೇತ್ರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಹಲವು ದಶಕಗಳ ಕಾಲ ತಮ್ಮ ಮಧುರ ಕಂಠದ ಮೂಲಕ ಸಂಗೀತ ಪ್ರೇಮಿಗಳ ಮನಸ್ಸು ಗೆದ್ದಿದ್ದ ಜಾನಕಿ ಅಮ್ಮ ಅವರ ಹಾಡುಗಳು ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಲಿವೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.