ನವದೆಹಲಿ, ಜು. 12 (DaijiworldNews/TA): ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಶಾಪಿಂಗ್, ಪ್ರಯಾಣ, ಆನ್ಲೈನ್ ಖರೀದಿ, ಇಎಂಐ ಹಾಗೂ ಕ್ಯಾಶ್ಬ್ಯಾಕ್ ಸೌಲಭ್ಯಗಳಿಗಾಗಿ ಲಕ್ಷಾಂತರ ಮಂದಿ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದಾರೆ. ಆದರೆ, ಕ್ರೆಡಿಟ್ ಕಾರ್ಡ್ ಹೊಂದಿರುವ ವ್ಯಕ್ತಿಯೊಬ್ಬರು ಬಿಲ್ ಪಾವತಿಸುವ ಮೊದಲೇ ಮೃತಪಟ್ಟರೆ, ಆ ಸಾಲವನ್ನು ಯಾರು ತೀರಿಸಬೇಕು? ಕುಟುಂಬದವರು ಅದನ್ನು ಪಾವತಿಸಬೇಕೇ? ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಇದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾನೂನಿನ ಪ್ರಕಾರ, ಕ್ರೆಡಿಟ್ ಕಾರ್ಡ್ ಸಾಲವನ್ನು ಭದ್ರತೆಯಿಲ್ಲದ ವೈಯಕ್ತಿಕ ಸಾಲ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಕಾರ್ಡ್ ಹೊಂದಿರುವ ವ್ಯಕ್ತಿ ಮೃತಪಟ್ಟರೆ ಅವರ ಪತ್ನಿ, ಪತಿ, ಮಕ್ಕಳು ಅಥವಾ ಪೋಷಕರು ತಮ್ಮ ಸ್ವಂತ ಹಣದಿಂದ ಆ ಸಾಲವನ್ನು ತೀರಿಸಬೇಕಾದ ಯಾವುದೇ ಕಾನೂನುಬದ್ಧ ಜವಾಬ್ದಾರಿ ಇರುವುದಿಲ್ಲ. ಬ್ಯಾಂಕುಗಳು ಕುಟುಂಬ ಸದಸ್ಯರ ಮೇಲೆ ನೇರವಾಗಿ ಹಣ ಪಾವತಿಸುವಂತೆ ಒತ್ತಡ ಹೇರುವಂತಿಲ್ಲ.
ಆದರೆ, ಇದರಿಂದ ಸಾಲ ಸಂಪೂರ್ಣವಾಗಿ ಮನ್ನಾ ಆಗುವುದಿಲ್ಲ. ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ, ಸ್ಥಿರ ಠೇವಣಿ (ಎಫ್ಡಿ), ಷೇರು ಹೂಡಿಕೆ, ಚಿನ್ನ, ಜಮೀನು ಅಥವಾ ಮನೆ ಸೇರಿದಂತೆ ಯಾವುದೇ ಆಸ್ತಿ ಇದ್ದರೆ, ಉತ್ತರಾಧಿಕಾರಿಗಳಿಗೆ ಆಸ್ತಿ ವರ್ಗಾಯಿಸುವ ಮೊದಲು ಬ್ಯಾಂಕ್ ತನ್ನ ಬಾಕಿಯನ್ನು ಆ ಆಸ್ತಿಯಿಂದ ಕಾನೂನುಬದ್ಧವಾಗಿ ವಸೂಲಿ ಮಾಡಬಹುದು.
ವ್ಯಕ್ತಿಯು ಉಯಿಲು (Will) ಬರೆದಿದ್ದರೆ, ಅದರಲ್ಲಿ ನೇಮಕಗೊಂಡಿರುವ ಕಾರ್ಯನಿರ್ವಾಹಕರು ಮೊದಲು ಎಲ್ಲಾ ಸಾಲಗಳನ್ನು ತೀರಿಸಿ ಬಳಿಕ ಉಳಿದ ಆಸ್ತಿಯನ್ನು ವಾರಸುದಾರರಿಗೆ ಹಂಚುತ್ತಾರೆ. ಉಯಿಲು ಇಲ್ಲದಿದ್ದರೆ, ನ್ಯಾಯಾಲಯ ನೇಮಿಸುವ ನಿರ್ವಾಹಕರ ಮೂಲಕ ಇದೇ ಪ್ರಕ್ರಿಯೆ ನಡೆಯುತ್ತದೆ. ಒಂದು ವೇಳೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಆಸ್ತಿ ಅಥವಾ ಬ್ಯಾಂಕ್ ಠೇವಣಿ ಇಲ್ಲದಿದ್ದರೆ, ಬ್ಯಾಂಕ್ ಆ ಬಾಕಿಯನ್ನು ಕುಟುಂಬದಿಂದ ವಸೂಲಿ ಮಾಡಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಸಾಲವನ್ನು 'ಬ್ಯಾಡ್ ಡೆಟ್' ಎಂದು ಪರಿಗಣಿಸಿ ವಸೂಲಾಗದ ಸಾಲವಾಗಿ ದಾಖಲಿಸಲಾಗುತ್ತದೆ.
ಜಂಟಿ ಮತ್ತು ಆ್ಯಡ್-ಆನ್ ಕಾರ್ಡ್ಗಳಿಗೆ ಬೇರೆ ನಿಯಮ: ಕ್ರೆಡಿಟ್ ಕಾರ್ಡ್ ಜಂಟಿ ಕಾರ್ಡ್ ಆಗಿದ್ದರೆ, ಮುಖ್ಯ ಕಾರ್ಡ್ದಾರರ ಮರಣದ ಬಳಿಕ ಮತ್ತೊಬ್ಬ ಜಂಟಿ ಕಾರ್ಡ್ದಾರರು ಬಾಕಿ ಮೊತ್ತ ಪಾವತಿಸಬೇಕಾಗುತ್ತದೆ. ಆದರೆ, ಕುಟುಂಬ ಸದಸ್ಯರು ಬಳಸುತ್ತಿದ್ದ ಆ್ಯಡ್-ಆನ್ ಕಾರ್ಡ್ಗಳ ಸಂದರ್ಭದಲ್ಲಿ ಅವರು ವೈಯಕ್ತಿಕವಾಗಿ ಸಾಲ ಪಾವತಿಸಬೇಕಾಗಿಲ್ಲ. ಮುಖ್ಯ ಕಾರ್ಡ್ ರದ್ದಾದ ಕೂಡಲೇ ಆ್ಯಡ್-ಆನ್ ಕಾರ್ಡ್ಗಳೂ ಸ್ವಯಂಚಾಲಿತವಾಗಿ ಅಮಾನ್ಯವಾಗುತ್ತವೆ.
ಕೆಲವು ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ಗಳೊಂದಿಗೆ 'ಕ್ರೆಡಿಟ್ ಶೀಲ್ಡ್' ಅಥವಾ ವಿಮೆ ಸೌಲಭ್ಯವನ್ನು ಒದಗಿಸುತ್ತವೆ. ಕಾರ್ಡ್ದಾರರು ಅಪಘಾತ ಅಥವಾ ಅನಾರೋಗ್ಯದಿಂದ ಮೃತಪಟ್ಟಿದ್ದರೆ, ವಿಮೆಯ ನಿಯಮಗಳಿಗೆ ಅನುಗುಣವಾಗಿ ಬಾಕಿ ಮೊತ್ತವನ್ನು ವಿಮಾ ಕಂಪನಿಯೇ ಬ್ಯಾಂಕ್ಗೆ ಪಾವತಿಸುತ್ತದೆ. ಇದಕ್ಕಾಗಿ ಕುಟುಂಬದವರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.