ಭಾವನಗರ, ಜು. 07 (DaijiworldNews/AK): ಗುಜರಾತ್ನ ಭಾವನಗರದಲ್ಲಿ ಸಿಂಹವೊಂದು ವ್ಯಕ್ತಿಯ ಮೇಲೆ ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ. ಸಿಂಹವು ಆ ವ್ಯಕ್ತಿಯನ್ನು ನೆಲಕ್ಕೆ ತಳ್ಳಿ, ಆತನ ಕಾಲು ಮತ್ತು ಕೈಯನ್ನು ತನ್ನ ದವಡೆ ಹಾಗೂ ಪಂಜಗಳ ನಡುವೆ ಬಿಗಿಯಾಗಿ ಕಚ್ಚಿ ಹಿಡಿದುಕೊಂಡಿರುವ ಭಯಾನಕ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ವ್ಯಕ್ತಿ ಸಿಂಹದ ತಲೆ ಸವರುತ್ತರುವುದು ವಿಡಿಯೋದಲ್ಲಿ ಕಾಣಬಹುದು.

ಭಾವನಗರ ಜಿಲ್ಲೆಯ ಪಲಿತಾನ ತಾಲೂಕಿನ ಗರಾಜಿಯಾ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 8.30 ರ ಸುಮಾರಿಗೆ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ಕಲುಭಾಯ್ ಬೋಘಾಯ್ ಪರ್ಮಾರ್ ಎಂಬುವವರು ತಮ್ಮ ಮನೆಯ ಸಮೀಪ ಹಸುಗಳನ್ನು ಮೇಯಿಸುತ್ತಿದ್ದಾಗ, ಪೊದೆಗಳ ನಡುವಿನಿಂದ ಬಂದ ಸಿಂಹವೊಂದು ಇದ್ದಕ್ಕಿದ್ದಂತೆ ಅವರ ಮೇಲೆ ಎರಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಸಿಂಹವು ಗಂಭೀರವಾಗಿ ಗಾಯಗೊಂಡಿರುವ ಕಲುಭಾಯ್ ಅವರನ್ನು ನೆಲದ ಮೇಲೆ ಮಲಗಿಸಿ ದಾಳಿ ಮಾಡುತ್ತಿರುವುದನ್ನು ಕಾಣಬಹುದು. ಸಿಂಹವು ಅವರ ಒಂದು ಕಾಲನ್ನು ತನ್ನ ಪಂಜಗಳಿಂದ ಬಿಗಿಯಾಗಿ ಹಿಡಿದಿದ್ದರೆ, ಕೈಯನ್ನು ತನ್ನ ದವಡೆಯೊಳಗೆ ಸಿಲುಕಿಸಿಕೊಂಡಿತ್ತು. ಕಲುಭಾಯ್ ಅವರು ತೀವ್ರ ರಕ್ತಸ್ರಾವದಿಂದ ಬಳಲುತ್ತಾ, ಸಿಂಹದ ಹಿಡಿತದಿಂದ ತಪ್ಪಿಸಿಕೊಳ್ಳಲು ಹತಾಶ ಪ್ರಯತ್ನ ನಡೆಸುತ್ತಿರುವುದು ವಿಡಿಯೋದಲ್ಲಿದೆ.
ಘಟನೆಯನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ತಕ್ಷಣವೇ ಸಿಂಹವನ್ನು ಸುತ್ತುವರಿದರು. ಪ್ರಾಣಿಯನ್ನು ಹೆದರಿಸಿ ಓಡಿಸಲು ಎಲ್ಲರೂ ಒಟ್ಟಾಗಿ ಜೋರಾಗಿ ಕೂಗುತ್ತಾ, ಹರಸಾಹಸ ಪಟ್ಟರು. ಗ್ರಾಮಸ್ಥರು ಎಷ್ಟೇ ಕೂಗಾಡಿದರೂ ಸಿಂಹವು ಮಾತ್ರ ಕಲುಭಾಯ್ ಅವರನ್ನು ಬಿಡದೆ ಹಾಗೆಯೇ ಹಿಡಿದುಕೊಂಡಿತ್ತು. ಕೊನೆಗೂ ಗ್ರಾಮಸ್ಥರ ತೀವ್ರ ಪ್ರತಿರೋಧದ ನಂತರ ಸಿಂಹವು ಆತನನ್ನು ಬಿಟ್ಟು ಕಾಡಿನ ಕಡೆಗೆ ಓಡಿದೆ.
ಸದ್ಯ ತೀವ್ರವಾಗಿ ಗಾಯಗೊಂಡಿರುವ ಕಲುಭಾಯ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರಲ್ಲಿ ಭೀತಿ ಆವರಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.