ನವದೆಹಲಿ, ಜು. 05 (DaijiworldNews/TA): ಪವಿತ್ರ ಅಮರನಾಥ ಯಾತ್ರೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಾತ್ರಿಕರಿಗೆ ವಿಶೇಷವಾಗಿ ಎರಡು ಪುಟಗಳ ಪತ್ರ ಬರೆದು ಶುಭಾಶಯ ಕೋರಿದ್ದಾರೆ. "ಹರ ಹರ ಮಹಾದೇವ್" ಹಾಗೂ "ಜೈ ಬಾಬಾ ಬರ್ಫಾನಿ" ಘೋಷಣೆಗಳೊಂದಿಗೆ ಭಕ್ತರಿಗೆ ಶುಭಯಾತ್ರೆಯ ಹಾರೈಕೆ ಸಲ್ಲಿಸಿರುವ ಅವರು, ಯಾತ್ರೆಯನ್ನು ಸುರಕ್ಷಿತ, ಶಿಸ್ತುಬದ್ಧ ಹಾಗೂ ಪರಿಸರ ಸ್ನೇಹಿಯಾಗಿ ನಡೆಸಲು ಐದು ಮಹತ್ವದ ಪ್ರತಿಜ್ಞೆಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಸೂಚಿಸಿದ ಐದು ಪ್ರತಿಜ್ಞೆಗಳು :
1. ಸ್ವಚ್ಛತೆಗೆ ಮೊದಲ ಆದ್ಯತೆ: ಯಾತ್ರೆಯ ಸಂಪೂರ್ಣ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ಭಕ್ತನ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಎಲ್ಲಿಯೂ ಕಸ ಎಸೆಯದೇ ನೈರ್ಮಲ್ಯವನ್ನು ಉಳಿಸಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.
2. ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ : ಮಳೆ, ಚಳಿ ಹಾಗೂ ಜಾರುವ ಪರ್ವತ ಮಾರ್ಗಗಳನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಮತ್ತು ಭದ್ರತಾ ಅಧಿಕಾರಿಗಳು ನೀಡುವ ಎಲ್ಲ ಸೂಚನೆಗಳನ್ನು ಪಾಲಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.
3. 'ವೋಕಲ್ ಫಾರ್ ಲೋಕಲ್'ಗೆ ಬೆಂಬಲ: ಜಮ್ಮು-ಕಾಶ್ಮೀರದ ಸ್ಥಳೀಯ ಕುಟುಂಬಗಳು ಮತ್ತು ಯುವಕರ ಜೀವನೋಪಾಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ, ಯಾತ್ರೆಯ ಒಟ್ಟು ವೆಚ್ಚದ ಕನಿಷ್ಠ ಶೇ.10ರಷ್ಟನ್ನು ಸ್ಥಳೀಯವಾಗಿ ತಯಾರಾಗುವ ಉತ್ಪನ್ನಗಳ ಖರೀದಿಗೆ ಮೀಸಲಿಡುವಂತೆ ಪ್ರಧಾನಿ ಮನವಿ ಮಾಡಿದ್ದಾರೆ.
4. ಪರಿಸರ ಸಂರಕ್ಷಣೆಗೆ 'ಏಕ್ ಪೆಡ್ ಮಾ ಕೆ ನಾಮ್': ಅಮರನಾಥ ಯಾತ್ರೆ ಮುಕ್ತಾಯವಾಗುವ ರಕ್ಷಾ ಬಂಧನದ ಸಂದರ್ಭದಲ್ಲಿ ಸಹೋದರ ಅಥವಾ ಸಹೋದರಿಗೆ ಒಂದು ಸಸಿಯನ್ನು ಉಡುಗೊರೆಯಾಗಿ ನೀಡಿ ಪರಿಸರ ಸಂರಕ್ಷಣೆಗೆ ಕೈಜೋಡಿಸುವಂತೆ ಕರೆ ನೀಡಿದ್ದಾರೆ.
5. 'ರಾಷ್ಟ್ರವೇ ಮೊದಲು' ಎಂಬ ಸಂಕಲ್ಪ: ಯಾತ್ರೆ ಮುಗಿದ ಬಳಿಕವೂ "ನೇಷನ್ ಫಸ್ಟ್" ಎಂಬ ಮನೋಭಾವದೊಂದಿಗೆ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ವಿಕಸಿತ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಪ್ರಧಾನಿ ತಿಳಿಸಿದ್ದಾರೆ.
ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಶ್ರಮಿಸುತ್ತಿರುವ ಶ್ರೀ ಅಮರನಾಥಜೀ ಶ್ರೈನ್ ಬೋರ್ಡ್, ಜಮ್ಮು-ಕಾಶ್ಮೀರ ಆಡಳಿತ, ಭಾರತೀಯ ಸೇನೆ, ಸಿಆರ್ಪಿಎಫ್, ಜಮ್ಮು-ಕಾಶ್ಮೀರ ಪೊಲೀಸ್, ಐಟಿಬಿಪಿ, ಬಿಎಸ್ಎಫ್, ಎನ್ಡಿಆರ್ಎಫ್, ವೈದ್ಯರು, ಸ್ವಯಂಸೇವಕರು ಸೇರಿದಂತೆ ಎಲ್ಲ ಸಿಬ್ಬಂದಿಯ ನಿಸ್ವಾರ್ಥ ಸೇವೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಪರ್ವತ ಪ್ರದೇಶದಲ್ಲಿ ಯಾತ್ರಿಕರಿಗೆ ನೆರವಾಗುವ ಸ್ಥಳೀಯ ಕುದುರೆ ಮಾಲೀಕರು ಹಾಗೂ ಪಲ್ಲಕ್ಕಿ ಹೊರುವವರ ಸೇವೆಯನ್ನು ಅವರು ವಿಶೇಷವಾಗಿ ಪ್ರಶಂಸಿಸಿದ್ದಾರೆ.
ಪ್ರಧಾನಿಯವರ ಪತ್ರಕ್ಕೆ ಯಾತ್ರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೆಟ್ರೋ ರೈಲು ಸೇರಿದಂತೆ ಸಾರ್ವಜನಿಕ ಆಸ್ತಿಗಳನ್ನು ಜನರು ತಮ್ಮದೇ ಎಂಬ ಭಾವನೆಯಿಂದ ಕಾಪಾಡಿಕೊಳ್ಳುವಂತೆ, ಅಮರನಾಥ ಯಾತ್ರೆಯ ಸೌಲಭ್ಯಗಳನ್ನೂ ಜವಾಬ್ದಾರಿಯಿಂದ ಬಳಸಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಯಾತ್ರಾ ಮಾರ್ಗದಲ್ಲಿ ಅನೇಕ ಭಕ್ತರು ಪ್ರಧಾನಿ ಬರೆದ ಪತ್ರವನ್ನು ಕೈಯಲ್ಲಿ ಹಿಡಿದು ಅವರ ಸಂದೇಶಕ್ಕೆ ಬೆಂಬಲ ಸೂಚಿಸುತ್ತಿರುವ ದೃಶ್ಯಗಳು ಗಮನ ಸೆಳೆದಿವೆ.
ಕೊನೆಯಲ್ಲಿ, ಬಾಬಾ ಅಮರನಾಥರ ಆಶೀರ್ವಾದ ಎಲ್ಲರ ಮೇಲಿರಲಿ ಹಾಗೂ ಪ್ರತಿಯೊಬ್ಬ ಯಾತ್ರಿಕರ ಪ್ರಯಾಣ ಸುರಕ್ಷಿತ ಮತ್ತು ಮಂಗಳಕರವಾಗಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.