ಉತ್ತರ ಪ್ರದೇಶ, ಮೇ. 09 (DaijiworldNews/AK): ಬಾಲ್ಯದಲ್ಲಿ ಅಪ್ಪನನ್ನು ಹಂತಕರು ಬಲಿಪಡೆದರು, ಪ್ರೀತಿಯಿಂದ ಸಾಕಿ ಸಲಹಬೇಕಿದ್ದ ತಾಯಿ ಕ್ಯಾನ್ಸರ್ಗೆ ಶರಣಾದರು. ಪ್ರೀತಿಯಿಂದ ಸಾಕಿ ಸಲಹಬೇಕಿದ್ದ ತಾಯಿ ಕ್ಯಾನ್ಸರ್ಗೆ ಶರಣಾದರು. ಕಣ್ಣೆದುರೇ ಇಡೀ ಪ್ರಪಂಚ ಕತ್ತಲಾದಾಗ ಕುಗ್ಗದೆ ಬದಲಾಗಿ, ತಮ್ಮ ತಂದೆಯ ಸಾವಿಗೆ ನ್ಯಾಯ ಒದಗಿಸಲು ಮತ್ತು ಸಮಾಜದಲ್ಲಿ ಗೌರವದಿಂದ ಬದುಕಲು ಶಿಕ್ಷಣವನ್ನೇ ಅಸ್ತ್ರವನ್ನಾಗಿಸಿಕೊಂಡರು. ಅವರ ಯಶೋಗಾಥೆ ಇಲ್ಲಿದೆ.

ಕಿಂಜಲ್ ಸಿಂಗ್ ಅವರು 5 ಜನವರಿ 1982ರಂದು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಜನಿಸಿದರು. ಅವರ ತಂದೆ ಕೆ.ಪಿ. ಸಿಂಗ್ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಆಗಿ ಕೆಲಸ ಮಾಡುತ್ತಿದ್ದರು. ಕಿಂಜಲ್ ಚಿಕ್ಕವಳಿದ್ದಾಗಲೇ ಅವರ ತಂದೆಯನ್ನು ಹತ್ಯೆ ಮಾಡಲಾಯಿತು. ಈ ಘಟನೆ ಕುಟುಂಬವನ್ನು ಸಂಪೂರ್ಣವಾಗಿ ಕಂಗೆಡಿಸಿತು. ನಂತರ, ಅವರ ತಾಯಿ ಕೂಡ ಕ್ಯಾನ್ಸರ್ನಿಂದ ಮೃತಪಟ್ಟರು. ಈ ಎರಡು ದೊಡ್ಡ ನಷ್ಟಗಳು ಕಿಂಜಲ್ ಹಾಗೂ ಅವರ ಸಹೋದರಿ ಜೀವನದಲ್ಲಿ ಭಾರೀ ಆಘಾತ ತಂದವು.
ಆದರೂ, ಈ ಸಂಕಷ್ಟಗಳು ಅವರನ್ನು ಕುಗ್ಗಿಸಲಿಲ್ಲ. ಬದಲಿಗೆ, ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಸಂಕಲ್ಪವನ್ನು ಬಲಪಡಿಸಿತು. ಕಿಂಜಲ್ ತಮ್ಮ ವಿದ್ಯಾಭ್ಯಾಸವನ್ನು ಲ್ಯಾಡಿ ಶ್ರೀ ರಾಮ್ ಕಾಲೇಜ್ನಲ್ಲಿ ಪೂರ್ಣಗೊಳಿಸಿದರು. ಬಳಿಕ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಪ್ರಾರಂಭಿಸಿದರು. ಕಠಿಣ ಪರಿಶ್ರಮದ ಫಲವಾಗಿ 2008ರಲ್ಲಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 25ನೇ ರ್ಯಾಂಕ್ ಪಡೆದು IAS ಅಧಿಕಾರಿಯಾಗಿ ಆಯ್ಕೆಯಾದರು.
ಅವರ ಸಹೋದರಿ ಪ್ರಾಂಜಲ್ ಸಿಂಗ್ ಕೂಡ ಯುಪಿಎಸ್ಸಿ ಪರೀಕ್ಷೆಯನ್ನು ಅದೇ ವರ್ಷ ಪಾಸ್ ಮಾಡಿ ಐಆರ್ಡಿ ಅಧಿಕಾರಿಯಾಗಿ ಆಯ್ಕೆಯಾದರು. ಇಬ್ಬರು ಸಹೋದರಿಯರು ಒಂದೇ ಸಮಯದಲ್ಲಿ ದೇಶದ ಅತ್ಯಂತ ಕಠಿಣ ಪರೀಕ್ಷೆಯನ್ನು ತೇರ್ಗಡೆಯಾದರು.
ಲಖನೌನಲ್ಲಿ ಜಂಟಿ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸಿ, ನಂತರ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಅವರು ಉತ್ತರ ಪ್ರದೇಶದಲ್ಲಿ ಪ್ರಮುಖ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಿನಲ್ಲಿ, ಕಿಂಜಲ್ ಸಿಂಗ್ ಮತ್ತು ಅವರ ಸಹೋದರಿ ಪ್ರಾಂಜಲ್ ಸಿಂಗ್ ಅವರ ಯಶೋಗಾಥೆ ಕೇವಲ ಎರಡು ಅಧಿಕಾರಿಗಳ ಕಥೆಯಲ್ಲ. ಅದು ಸಂಕಷ್ಟಗಳನ್ನು ಜಯಿಸಿ, ಕನಸುಗಳನ್ನು ಸಾಕಾರಗೊಳಿಸಿದ ಸ್ಫೂರ್ತಿದಾಯಕ ಪಯಣವಾಗಿದೆ. ತಮ್ಮ ತಂದೆಯ ಹತ್ಯೆಗೆ ನ್ಯಾಯ ದೊರಕಿಸಲು ಅವರು ಮತ್ತು ಅವರ ಸಹೋದರಿ ಹೋರಾಟ ನಡೆಸಿದರು. ಸುಮಾರು 31 ವರ್ಷಗಳ ನಂತರ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಯಿತು.