ಮುಂಬೈ, ಮಾ. 23 (DaijiworldNews/TA): ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದ್ದ ದುರಂತ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಕ್ಕೆ 12 ವರ್ಷಗಳ ಬಳಿಕ ಹೊಸ ತಿರುವು ಸಿಕ್ಕಿದೆ. ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಮೃತಪಟ್ಟ ಯುವಕನ ತಾಯಿ ನಡೆಸಿದ ದೀರ್ಘ ಹೋರಾಟಕ್ಕೆ ಇದೀಗ ಭಾಗಶಃ ನ್ಯಾಯ ದೊರೆತಿದ್ದು, ಸಂಬಂಧಪಟ್ಟ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

2014ರಲ್ಲಿ ಗೋವಂಡಿ ಪ್ರದೇಶದ 23 ವರ್ಷದ ಸಲ್ಮಾನ್ ಬಾಬರ್ ಶಾ ಅವರು ಬೈಕ್ ಅಪಘಾತಕ್ಕೀಡಾಗಿ ಬಲ ತೊಡೆಯ ಮೂಳೆ ಮುರಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಗಾಯ ಗಂಭೀರವಾಗಿಲ್ಲ ಎಂದು ಕುಟುಂಬ ನಿರೀಕ್ಷಿಸಿದ್ದರೂ, ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ನಂತರ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಏಪ್ರಿಲ್ 17, 2014ರಂದು ‘ಸೆಪ್ಟಿಸೆಮಿಯಾ’ (ತೀವ್ರ ರಕ್ತ ಸೋಂಕು) ಕಾರಣದಿಂದ ಅವರು ಮೃತಪಟ್ಟರು.
ಆದರೆ ಅವರ ತಾಯಿ ನಸೀಮ್ ಬಾನು ಬಾಬರ್ ಷಾ ಈ ಸಾವನ್ನು ಸಹಜ ಎಂದು ಒಪ್ಪಲಿಲ್ಲ. ವೈದ್ಯರ ವಿರುದ್ಧ ಗಂಭೀರ ನಿರ್ಲಕ್ಷ್ಯದ ಆರೋಪಗಳನ್ನು ಮಾಡಿದರು. ವಿದ್ಯುತ್ ಇಲ್ಲದ ಪರಿಸ್ಥಿತಿಯಲ್ಲಿಯೇ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ, ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ಬಳಸಿಲ್ಲ, ರೋಗಿಯ ಸ್ಥಿತಿಯ ಬಗ್ಗೆ ಕುಟುಂಬಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಅವರು ಆರೋಪಿಸಿದರು. ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಉದ್ದೇಶಪೂರ್ವಕವಾಗಿ ನಾಶಪಡಿಸಲಾಗಿದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದರು.
ನ್ಯಾಯಕ್ಕಾಗಿ ನಸೀಮ್ ಬಾನು ನಿರಂತರ ಹೋರಾಟ ನಡೆಸಿದರು. ಅವರು ಹಲವು ಬಾರಿ ಪೊಲೀಸರಿಗೆ ದೂರು ಸಲ್ಲಿಸಿ, ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯಲು ಪ್ರಯತ್ನಿಸಿದರು. ಕೊನೆಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋದರು. ಈ ದೀರ್ಘ ಹೋರಾಟದ ಫಲವಾಗಿ, ಈಗ ಘಟನೆ ನಡೆದು 12 ವರ್ಷಗಳ ನಂತರ ಸಂಬಂಧಪಟ್ಟ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.