ಉತ್ತರಪ್ರದೇಶ, ಜ.03 (DaijiworldNews/AK): ಶ್ರವಣಕುಮಾರ್ ವಿಶ್ವಕರ್ಮ ಎಂಬುವವರು ಶಂಖ್ ಏರ್ನ ಅಧ್ಯಕ್ಷರಾಗಿದ್ದಾರೆ. ವಿಮಾನ ಹಾರಾಟ ನಡೆಸಲು ಅನುಮತಿ ಪಡೆದ ಮೂರು ಹೊಸ ವಿಮಾನ ಸಂಸ್ಥೆಗಳಲ್ಲಿ ಶಂಖ್ ಏರ್ ಒಂದು. ವಿಶ್ವಕರ್ಮ ಅವರು ಆಟೊ, ಟೆಂಪೋ ಡ್ರೈವರ್ ಆಗಿದ್ದವರು, ಈಗ ವಿಮಾನ ಕಂಪನಿಯನ್ನು ನಡೆಸುತ್ತಿರುವ ಸ್ಪೂರ್ತಿದಾಯಕ ಕಥೆ.

ಕೇಂದ್ರ ಸರ್ಕಾರದಿಂದ ಲೈಸೆನ್ಸ್ ಪಡೆದ ಮೂರು ಹೊಸ ಏರ್ಲೈನ್ ಕಂಪನಿಗಳಲ್ಲಿ ಶಂಖ್ ಏರ್ ಒಂದು. ಇದರ ಸ್ಥಾಪನೆ ಹಾಗೂ ಸ್ಥಾಪಕನ ಹಿಂದಿನ ಕಥೆ ಸ್ಫೂರ್ತಿದಾಯಕವಾಗಿದೆ. ಉತ್ತರಪ್ರದೇಶದ ಈ ವ್ಯಕ್ತಿ ಒಂದು ಕಾಲದಲ್ಲಿ ಕಾನಪುರ್ನ ಬೀದಿಗಳಲ್ಲಿ ಟೆಂಪೋ ಡ್ರೈವರ್ ಆಗಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಇವತ್ತು ವಿಮಾನ ಕಂಪನಿಯ ಮಾಲೀಕನಾಗಿ ಬೆಳೆದಿದ್ದಾರೆ. ಶಂಖ್ ಏರ್ ಶೀಘ್ರದಲ್ಲೇ ವಿಮಾನಗಳ ಹಾರಾಟ ನಡೆಸಲಿದೆ.
ಶ್ರವಣ್ ಕುಮಾರ್ ವಿಶ್ವಕರ್ಮ ಹೆಚ್ಚು ಓದಲಿಲ್ಲ. ಆಟೊರಿಕ್ಷಾ ಓಡಿಸುತ್ತಿದ್ದರು. ಟೆಂಪೋ ಇಟ್ಟುಕೊಂಡು ಕೆಲ ಬ್ಯುಸಿನೆಸ್ಗಳಿಗೆ ವಿಫಲ ಯತ್ನ ಮಾಡಿದರು. ಆದರೆ, ಹತಾಶರಾಗಲಿಲ್ಲ. 2014ರಲ್ಲಿ ಸಿಮೆಂಟ್ ಬ್ಯುಸಿನೆಸ್ಗೆ ಇಳಿದಾಗ ವಿಶ್ವಾಸ ಸಿಕ್ಕಿತು. ಟಿಎಂಟಿ ರೀಬಾರ್ ಉದ್ಯಮ ಕೈಹಿಡಿಯಿತು. ಸಿಮೆಂಟ್, ಮೈನಿಂಗ್ ಮತ್ತು ಟ್ರಾನ್ಸ್ಪೋರ್ಟ್ ಸೆಕ್ಟರ್ನಲ್ಲಿ ಬ್ಯುಸಿನೆಸ್ ಬೆಳೆಸಿದರು. ಹಲವು ಟ್ರಕ್ಗಳನ್ನು ಖರೀದಿಸಿದರು. ಈ ಹಂತದಲ್ಲೇ ಅವರಿಗೆ ಭವಿಷ್ಯದ ಯೋಜನೆಗಳು ಮನಸ್ಸಿಗೆ ಬಂದವು. ಅಂಥ ಒಂದು ಆಲೋಚನೆಯ ಕುಡಿಯೇ ಶಂಖ್ ಏರ್.
ನಾಲ್ಕು ವರ್ಷದ ಹಿಂದೆ, ಟ್ರಕ್ನಂತೆ ವಿಮಾನಗಳನ್ನೂ ಓಡಿಸಬೇಕೆಂಬ ಆಲೋಚನೆ ವಿಶ್ವಕರ್ಮರ ತಲೆಯಲ್ಲಿ ಮೊದಲಿಟ್ಟಿತು. ಅಷ್ಟಕ್ಕೇ ಅದು ನಿಲ್ಲಲಿಲ್ಲ. ವಿಮಾನ ಸಂಸ್ಥೆ ಕಟ್ಟಲು ಏನು ಬೇಕು, ಆ ಉದ್ಯಮ ಹೇಗೆ ಕೆಲಸ ಮಾಡುತ್ತೆ ಎಂಬುದನ್ನು ಅರಿಯಲು ಯತ್ನಿಸಿದರು. ತಮ್ಮ ಟ್ರಾನ್ಸ್ಪೋರ್ಟ್ ಬ್ಯುಸಿನೆಸ್ನಲ್ಲಿ ವಿಮಾನದ ಸೇವೆಯನ್ನೂ ನಡೆಸಿ ಅನುಭವ ಇದ್ದ ಕಾರಣ ಶಂಖ್ ಏರ್ಗೆ ಸರ್ಕಾರದಿಂದ ಎನ್ಒಸಿ ಕೂಡ ಸಿಕ್ಕಿತು. ಅವರ ಪ್ರಕಾರ ವಿಮಾನ ಎಂಬುದು ಬಸ್ ಅಥವಾ ಟೆಂಪೋ ರೀತಿಯಲ್ಲೇ ಒಂದು ಸಾರಿಗೆ ವಾಹನ ಮಾತ್ರ. ಅದನ್ನು ಬೇರೆ ರೀತಿಯಲ್ಲಿ ನೋಡಬಾರದು ಎಂದು ಶಂಖ್ ಏರ್ನ ಛೇರ್ಮನ್ ಆಗಿರುವ ಅವರು ಹೇಳುತ್ತಾರೆ.
ಶಂಖ್ ಏರ್ ಇದೇ ಜನವರಿ ತಿಂಗಳಲ್ಲಿ ಕಾರ್ಯಾಚರಣೆಗೆ ಇಳಿಯುತ್ತದೆ. ಆರಂಭದಲ್ಲಿ ಏರ್ಬಸ್ನ ಮೂರು ವಿಮಾನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಲಕ್ನೋ, ಮುಂಬೈ, ದೆಹಲಿ ಮತ್ತಿತರ ಕೆಲ ನಗರಗಳಿಗೆ ಇವರ ವಿಮಾನಗಳ ಹಾರಾಟ ನಡೆಯುತ್ತದೆ.