ಬೆಳಗಾವಿ, ನ. 19 (DaijiworldNews/AA): ತಾಲೂಕಿನ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳ ದಿಢೀರ್ ಸಾವಿಗೆ ಹೆಚ್ಎಸ್ ಬ್ಯಾಕ್ಟೀರಿಯಾ ಕಾರಣ. ಸಾಂಕ್ರಾಮಿಕ ರೋಗದಿಂದ ಕೃಷ್ಣಮೃಗಗಳು ಮೃತಪಟ್ಟಿವೆ ಎಂದು ದೃಢಪಟ್ಟಿದೆ.

31 ಕೃಷ್ಣಮೃಗಗಳ ಸಾವಿಗೆ (ಗಳಲೆ) ಹಿಮೋರೆಜಿಕ್ ಸೆಪ್ಟಿಸೆಮೀಯಾ ಕಾರಣ ಎನ್ನುವುದು ದೃಢಪಟ್ಟಿದೆ ಎಂದು ಮಾಧ್ಯಮಗಳಿಗೆ ಮೃಗಾಲಯದ ಎಸಿಎಫ್ ನಾಗರಾಜ್ ಬಾಳೆಹೊಸೂರ್ ತಿಳಿಸಿದ್ದಾರೆ.
ಅ.13ರಿಂದ 16ರವರೆಗೆ 31 ಕೃಷ್ಣಮೃಗಗಳು ಸಾವಿಗೀಡಗಿದ್ದವು. ಕೃಷ್ಣಮೃಗಗಳ ಸಾವು ಹಿನ್ನೆಲೆ ಬನ್ನೇರುಘಟ್ಟ, ಬೆಂಗಳೂರಿನ ತಜ್ಞ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವೈರಾಣು ತಜ್ಞ ಡಾ.ಚಂದ್ರಶೇಖರ ಅವರು ಮೃಗಾಲಯದ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.
ಕೃಷ್ಣಮೃಗಗಳು ಹೆಚ್ಎಸ್ ಬ್ಯಾಕ್ಟೀರಿಯಾದಿಂದ ಸಾವನ್ನಪ್ಪಿವೆ. ಮತ್ತೊಂದೆಡೆ ಹಠಾತ್ ತಾಪಮಾನ ಕುಸಿತ, ಒತ್ತಡದಿಂದಲೂ ಕೃಷ್ಣಮೃಗಗಳ ಸಾವಿಗೆ ಕಾರಣವಾಗಿದೆ ಎಂದು ವರದಿಯಲ್ಲಿ ಅಂತಲೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಕೃಷ್ಣಮೃಗಗಳ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ. ಬದುಕುಳಿದ ಏಳು ಕೃಷ್ಣಮೃಗಗಳಿಗೆ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.