ಬೆಂಗಳೂರು,ಸೆ.20 (DaijiworldNews/AA): ರಾಹುಲ್ ಗಾಂಧಿಯದು ಚುನಾವಣಾ ಆಯೋಗದ ಟಾರ್ಗೆಟ್ ಅಲ್ಲ. ಅವರದು ಇಂದಿರಾ ಗಾಂಧಿಯ ಎಮರ್ಜೆನ್ಸಿ (ತುರ್ತು ಪರಿಸ್ಥಿತಿ) ಮಾನಸಿಕತೆ (ಮೈಂಡ್ಸೆಟ್) (ಇಎಂಐ- ಎಮರ್ಜೆನ್ಸಿ ಮೈಂಡ್ಸೆಟ್ ಆಫ್ ಇಂದಿರಾ) ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲ ಅವರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಹಿಂದೆ ಇಂದಿರಾ ಅವರ ನಿಕಟವರ್ತಿಯೊಬ್ಬರು ‘ಇಂದಿರಾ ಈಸ್ ಇಂಡಿಯ, ಇಂಡಿಯ ಈಸ್ ಇಂದಿರಾ’ ಎಂದಿದ್ದರು. ಪರಿವಾರ ತಂತ್ರ (ಕುಟುಂಬದ ಆಡಳಿತ) ಲೋಕತಂತ್ರಕ್ಕಿಂತ (ಪ್ರಜಾಪ್ರಭುತ್ವ), ಸಂವಿಧಾನಕ್ಕಿಂತ ಮಿಗಿಲು ಎಂದು ಅವರು ಭಾವಿಸುತ್ತಾರೆ ಎಂದು ಟೀಕಿಸಿದರು.
ರಾಹುಲ್ ಗಾಂಧಿಯವರು ಚುನಾವಣೆ ಸೋತರೆ ಚುನಾವಣೆ ಆಯೋಗ ತಪ್ಪಿತಸ್ಥ ಎನಿಸುತ್ತದೆ. ಕೋರ್ಟ್ ಕೇಸಿನಲ್ಲಿ ಅವರು ಸೋತರೆ ನ್ಯಾಯಾಂಗ ವ್ಯವಸ್ಥೆ ಸರಿಯಿಲ್ಲ ಎನ್ನುತ್ತಾರೆ. ತೆಲಂಗಾಣದಲ್ಲಿ ರಾಹುಲ್ ಗಾಂಧಿಯವರ ತಂಡ ಗೆದ್ದರೆ ಅವರಿಗೆ ಅಲ್ಲಿ ಯಾವುದೇ ಸಮಸ್ಯೆ ಇಲ್ಲ. ಜಾರ್ಖಂಡ್, ಜಮ್ಮು- ಕಾಶ್ಮೀರದಲ್ಲಿ ಅವರಿಗೆ ಸಮಸ್ಯೆ ಕಾಣುವುದಿಲ್ಲ. ಮಹಾರಾಷ್ಟ್ರದಲ್ಲಿ ಅವರು ಸೋತಾಗ ಸುಪ್ರೀಂ ಕೋರ್ಟಿಗೆ ಹೋಗಿದ್ದರು. ಆಳಂದದ ವಿಚಾರದಲ್ಲೂ ಮತದಾರರ ಹೆಸರನ್ನು ಆನ್ಲೈನ್ ಅಡಿ ರದ್ದು ಮಾಡಲಾಗದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಹೇಳಿದರು.
ನಂಜೇಗೌಡರ ವಿಚಾರ ಮಾತನಾಡಲು ಆಗ್ರಹ
ರಾಹುಲ್ ಗಾಂಧಿಯವರು ಮತಗಳ್ಳತನದ ಕುರಿತು ಮಾತನಾಡುತ್ತಾರೆ. ನಂಜೇಗೌಡರ ಕುರಿತು ಮಾತನಾಡಲಿ ಎಂದು ಆಗ್ರಹಿಸಿದರು. ಡಾ.ಪರಮೇಶ್ವರ್ ಅವರ ವೈರಲ್ ವಿಡಿಯೋದಲ್ಲಿ ಕಟಾಕಟ್, ಕಟಾಕಟ್ ಎಂದು ಮತ ಹಾಕುತ್ತಿದ್ದ ಕುರಿತು ಮಾತನಾಡಿದ್ದಾರೆ. ಪರಮೇಶ್ವರ್ ಅವರ ವಿಡಿಯೋವನ್ನು ರಾಹುಲ್ ಗಾಂಧಿಯವರು ನೋಡಲಿ; ಶಶಿ ತರೂರ್, ಕೀರ್ತಿ ಆಜಾದ್ ಅವರ ವಿಡಿಯೋಗಳನ್ನೂ ವೀಕ್ಷಿಸಬೇಕು ಎಂದು ಸವಾಲೆಸೆದರು.
ಇಂದಿರಾ ಗಾಂಧಿಯವರು ಮತದಾನದಲ್ಲಿ ಅಕ್ರಮ ಸಂಬಂಧ ಶಿಕ್ಷೆಗೆ ಒಳಗಾದುದದನ್ನು ನೆನಪಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಅವರೆಲ್ಲರೂ ಮಹಾ ಚೋರರು ಎಂದು ಟೀಕಿಸಿದರು. ಮೊದಲು ನಿಮ್ಮ ಮನೆಯ ಕಳ್ಳತನವನ್ನು ನೋಡಿ ಎಂದು ತಿಳಿಸಿದರು.
ಕಾಂಗ್ರೆಸ್ ಒಳಜಗಳದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ನಮಸ್ತೆ ಸದಾ ವತ್ಸಲೆ..’ ಹಾಡಿದ್ದು, ಬಳಿಕ ಅವರ ಬಳಿ ಕ್ಷಮೆ ಕೇಳಿಸಲಾಯಿತು. ಈಗ ಕೆಲವು ನಾಯಕರು ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ರಾಹುಲ್ಗೆ ವಿರೋಧ ವ್ಯಕ್ತಪಡಿಸಲು ಮುಂದಾಗಿದ್ದಾರೆ. ದರ್ಬಾರಿ ಪಕ್ಷಕ್ಕೆ ಸಂಕಷ್ಟ ಒದಗಿಬರುತ್ತಿದೆ ಎಂದು ಹೇಳಿದರು.
ರಾಹುಲ್ ಅವರು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತಗಳ್ಳತನದ ಮಾತನಾಡಿದ್ದಾರೆ. ಈ ಮೂಲಕ ತಮಿಳುನಾಡಿನಿಂದ ಆಯ್ಕೆಯಾದ ಉಪ ರಾಷ್ಟ್ರಪತಿಗಳನ್ನು, ಅಲ್ಲಿನ ಜನತೆಯನ್ನು ಅವಮಾನಿಸಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.