ಬೆಂಗಳೂರು, ಜು. 31 (DaijiworldNews/AA): 'ಬಿಜೆಪಿಯವರು ಅಧಿಕಾರ ದುರುಪಯೋಗ, ಚುನಾವಣೆ ಆಯೋಗದ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಜನರಿಗೆ ತಿಳಿಸಲು ರಾಹುಲ್ ಗಾಂಧಿ ಪ್ರತಿಭಟನೆ ಮಾಡ್ತಿದ್ದಾರೆ' ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಆಗಸ್ಟ್ 5ರಂದು ರಾಹುಲ್ ಗಾಂಧಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, 'ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಬಿಜೆಪಿ ಅವರು ಯಾವ ರೀತಿ ಅಧಿಕಾರ ದುರುಪಯೋಗ ಮಾಡಿಕೊಂಡು, ಎಲೆಕ್ಷನ್ ಕಮಿಷನ್ ಉಪಯೋಗ ಮಾಡಿಕೊಂಡು ಹೆಚ್ಚು ಕಡಿಮೆ ಮಾಡಿದ್ರು ಅನ್ನೋದನ್ನ ನಾವು ಬೆಳಕಿಗೆ ತರಬೇಕಿದೆ. ನಮ್ಮ ಪಕ್ಷದಿಂದ ಈ ಬಗ್ಗೆ ರಿಸರ್ಚ್ ಆಗಿದೆ. ನಮ್ಮ ನಾಯಕರು ರಾಜ್ಯದ ಜನತೆಗೆ ಈ ವಿಚಾರವನ್ನು ತಿಳಿಸುತ್ತಾರೆ. ನೀವು, ನಾವು ಎಚ್ಚರಿಕೆ ವಹಿಸಬೇಕು ಅನ್ನೋ ದೃಷ್ಟಿಯಿಂದ ನಾವು ಪ್ರತಿಭಟನೆ ಮಾಡ್ತಿದ್ದೇವೆ' ಎಂದು ತಿಳಿಸಿದ್ದಾರೆ.
'ಈಗ ದೇಶದಲ್ಲಿ ಆಗಿರೋದು ಆಗಿ ಹೋಗಿದೆ. ಆದರೆ ಈ ವಿಚಾರ ಜನರಿಗೆ ಗೊತ್ತಾಗಬೇಕು. ಅದಕ್ಕೆ ರಾಹುಲ್ ಗಾಂಧಿ ಬರುತ್ತಿದ್ದಾರೆ. ನಿನ್ನೆ ಪ್ರಾಥಮಿಕ ಸಭೆ ಆಗಿದೆ. ಇವತ್ತು ಸುರ್ಜೇವಾಲ, ವೇಣುಗೋಪಾಲ್ ಬರುತ್ತಿದ್ದಾರೆ' ಎಂದಿದ್ದಾರೆ.
'ರ್ಯಾಲಿ ಮಾಡಬೇಕಾ? ಸಮಾವೇಶ ಮಾಡಬೇಕಾ ಎಂದು ಚರ್ಚೆ ಇದೆ. ಕೋರ್ಟ್ ತೀರ್ಪು ಕೂಡಾ ಪ್ರತಿಭಟನೆ, ರ್ಯಾಲಿಗೆ ಸಂಬಂಧಿಸಿದಂತೆ ಇದೆ. ನಮ್ಮ ಸರ್ಕಾರದ ಆದೇಶ ಇದೆ. ಇದರ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಸಿಎಂ ಜೊತೆ ಡೆಲ್ಲಿಯವರು ಮಾತಾಡಿದ್ದಾರೆ. ನಾನು ಮಾತಾಡಿದ್ದೇನೆ' ಎಂದು ಸ್ಪಷ್ಟನೆ ನೀಡಿದ್ದಾರೆ.