ನವದೆಹಲಿ, ಜು. 22 (DaijiworldNews/AK): ಕಡಲನಗರಿ ಮಂಗಳೂರಿನಲ್ಲಿ ವೀರ ವನಿತೆ ಅಬ್ಬಕ್ಕ ರಾಣಿ ಹೆಸರಿನಲ್ಲಿ ಪ್ರತ್ಯೇಕ ಮೆರಿಟೈಮ್ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂದು ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗಗಳ ಸಚಿವಾಲಯದ ಕಾರ್ಯದರ್ಶಿ ಟಿ.ಕೆ. ರಾಮಚಂದ್ರನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ನವದೆಹಲಿಯಲ್ಲಿ ಸಚಿವಾಲಯದ ಕಾರ್ಯದರ್ಶಿಯನ್ನು ಭೇಟಿ ಮಾಡಿದ ಸಂಸದರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಮ್ಮ ದೇಶದ ಮೆರಿಟೈಮ್ ಸಾಮರ್ಥ್ಯಕ್ಕೆ ಹೊಂದಿಕೊಂಡು ಭಾರತವನ್ನು ಜಾಗತಿಕ ಮೆರಿಟೈಮ್ ಹಬ್ ಮಾಡುವ ದೂರದೃಷ್ಟಿಯನ್ನು ಹೊಂದಿದ್ದಾರೆ. ಹೀಗಿರುವಾಗ, ಬಹಳ ಶ್ರೀಮಂತ ಮೆರಿಟೈಮ್ ಪರಂಪರೆಯನ್ನು ಹೊಂದಿರುವ ಮಂಗಳೂರಿನಲ್ಲಿ ಪ್ರತ್ಯೇಕ ಮೆರಿಟೈಮ್ ವಿವಿಯನ್ನು ಸ್ಥಾಪಿಸುವುದಕ್ಕೆ ವಿಪುಲ ಅವಕಾಶದ ಜತೆಗೆ ಸೂಕ್ತ ಸ್ಥಳವಾಗಿದೆ. ಇನ್ನು 16ನೇ ಶತಮಾನದಲ್ಲಿಉಳ್ಳಾಲದ ರಾಣಿ ಅಬ್ಬಕ್ಕ ತಮ್ಮ ವೀರ ಪರಾಕ್ರಮ, ನಾಯಕತ್ವದಲ್ಲಿ ಪೋರ್ಚುಗೀಸರ ವಿರುದ್ಧ ಧೈರ್ಯವಾಗಿ ಹೋರಾಡುವ ಮೂಲಕ ಕರಾವಳಿಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಧೀರ ಮಹಿಳೆ. ತನ್ನ ಧೈರ್ಯ ಹಾಗೂ ತಂತ್ರಗಾರಿಕೆಯಿಂದ ಭಾರತದ ಕಡಲ ತೀರವನ್ನು ಹೇಗೆ ರಕ್ಷಣೆ ಮಾಡಿದ್ದರು ಎನ್ನುವುದಕ್ಕೆ ರಾಣಿ ಅಬ್ಬಕ್ಕ ಅವರ ರಾಜ್ಯಭಾರ ಉತ್ತಮ ನಿದರ್ಶನ. 2025 ವರ್ಷದಲ್ಲಿ ವೀರರಾಣಿ ಅಬ್ಬಕ್ಕ ಅವರ 500ನೇ ವರ್ಷಾಚರಣೆ ಮಾಡಲಾಗುತ್ತಿದೆ. ಇಂಥಹ ಸುಸಂದರ್ಭದಲ್ಲಿ ಮಂಗಳೂರಿನಲ್ಲಿ ಕಡಲ ರಕ್ಷಣೆಗೆ ಪೂರಕವಾಗುವ ಮೆರಿಟೈಮ್ ವಿವಿಯನ್ನು ಸ್ಥಾಪಿಸಿ ಅದಕ್ಕೆ ರಾಣಿ ಅಬ್ಬಕ್ಕ ಹೆಸರಿಡುವುದು ಅತ್ಯಂತ ಸೂಕ್ತ ಹಾಗೂ ಔಚಿತ್ಯಪೂರ್ಣವಾದದ್ದು ಎಂದು ಕ್ಯಾ. ಚೌಟ ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೊಂದೆಡೆ, ನವ ಮಂಗಳೂರು ಬಂದರು ಪ್ರಾಧಿಕಾರ(ಎನ್ಎಂಪಿಎ) ತನ್ನ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವಾಗ, ಬಂದರು ನಗರಿ ಮಂಗಳೂರಿನಲ್ಲಿ ಮೆರಿಟೈಮ್ ವಿವಿ ಸ್ಥಾಪಿಸುವುದು ಕೂಡ ಹೆಚ್ಚು ಪ್ರಸ್ತುತವೆನಿಸುತ್ತದೆ. ಇದರಿಂದ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡದ ಆರ್ಥಿಕತೆಯು ಮತ್ತಷ್ಟು ಸದೃಢಗೊಳ್ಳುತ್ತದೆ. ಹೀಗಾಗಿ, ಈ ವಿವಿ ಸ್ಥಾಪನೆ ಪ್ರಸ್ತಾವನೆಯು ಪ್ರಧಾನಮಂತ್ರಿಯವರ 'ಮೆರಿಟೈಮ್ ಅಮೃತ್ ಕಾಲ್ ವಿಷನ್ 2047 'ದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ ಎಂದು ಕ್ಯಾ. ಚೌಟ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನ ಭೌಗೋಳಿಕ ಅನುಕೂಲಗಳು, ಐತಿಹಾಸಿಕ ಮಹತ್ವ ಮತ್ತು ಪ್ರಮುಖ ಬಂದರುಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಹತ್ತಿರವಿರುವ ಕಾರಣ ಇಲ್ಲಿ ಮೆರಿಟೈಮ್ ವಿವಿಯಂಥ ರಾಷ್ಟ್ರೀಯ ಮನ್ನಣೆಯ ಸಂಸ್ಥೆಯನ್ನು ಸ್ಥಾಪಿಸುವುದಕ್ಕೆ ಅತ್ಯಂತ ಸೂಕ್ತ ಸ್ಥಳವಾಗಿದೆ. ಈ ವಿವಿಯಲ್ಲಿ ಬಿ.ಟೆಕ್, ಬಿ.ಎಸ್ಸಿ, ಬಿಬಿಎ, ಎಂ.ಟೆಕ್, ಎಂಬಿಎ, ಎಂ.ಎಸ್ಸಿ ಮತ್ತು ಡಿಪ್ಲೊಮಾಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕೋರ್ಸ್ ಗಳನ್ನು ಪರಿಚಯಿಸಬಹುದು.ಇದರಿಂದ ಮೆರೀನ್ ಎಂಜಿನಿಯರಿಂಗ್, ಕಡಲ ಕಾನೂನು, ಬಂದರು ಮತ್ತು ಟರ್ಮಿನಲ್ ನಿರ್ವಹಣೆ ಮತ್ತು ಕಡಲ ಮಾಹಿತಿ ತಂತ್ರಜ್ಞಾನದಂತಹ ವಿಷಯಗಳಲ್ಲಿ ಭವಿಷ್ಯಕ್ಕೆ ಸಿದ್ಧವಾದ ವೃತ್ತಿಪರರನ್ನು ಸೃಷ್ಟಿಸಲು ಈ ವಿಶ್ವವಿದ್ಯಾಲಯವು ನಿರ್ಣಾಯಕ ಪಾತ್ರ ವಹಿಸಲಿದೆ. ಇದು ಭಾರತದ ಕಡಲ ಪ್ರಗತಿಯ ಕೌಶಲ್ಯ ಅಭಿವೃದ್ಧಿ, ಸಂಶೋಧನೆ ಮತ್ತು ನೀತಿ ನಾವೀನ್ಯತೆ ಅಗತ್ಯಗಳನ್ನು ಕೂಡ ಪೂರೈಸುತ್ತದೆ ಎಂದು ಕ್ಯಾ. ಚೌಟ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ವಿವಿ ಸ್ಥಾಪಿಸಲು ತಜ್ಞರ ಸಮಿತಿ ನೇಮಕಕ್ಕೆ ಕ್ಯಾ. ಚೌಟ ಸಲಹೆ
ಮಂಗಳೂರಿನಲ್ಲಿ ಮೆರಿಟೈಮ್ ವಿವಿಯನ್ನು ಸ್ಥಾಪಿಸುವುದಕ್ಕೆ ಬೇಕಾಗುವ ಪೂರ್ವ ಸಿದ್ಧತೆ, ಸಾಧ್ಯಾ-ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವುದಕ್ಕೆ ಸಚಿವಾಲಯದಿಂದ ಪ್ರತ್ಯೇಕ ತಜ್ಞರ ಸಮಿತಿಯೊಂದನ್ನು ನೇಮಕಗೊಳಿಸಬೇಕು. ಈ ಸಮಿತಿ ಮೂಲಕ ವಿವಿಯ ಸ್ಥಾಪನೆಯ ಚೌಕಟ್ಟು ಹಾಗೂ ಅದಕ್ಕೆ ಸಂಬಂಧಿಸಿದ ರೂಪುರೇಷಗಳನ್ನು ಸಿದ್ಧಪಡಿಸಬೇಕು. ಜತೆಗೆ ನವ ಮಂಗಳೂರು ಪ್ರಾಧಿಕಾರದಿಂದ ಈ ಬಗ್ಗೆ ವಿಸೃತ್ತ ಯೋಜನಾ ವರದಿ(ಡಿಪಿಆರ್)ಯನ್ನು ಕೂಡ ಸಿದ್ಧಪಡಿಸಬೇಕು. ಈ ವಿವಿ ಸ್ಥಾಪಿಸುವುದಕ್ಕೆ ಇದಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಗಳು, ಪಾಲುದಾರರು, ಸಚಿವಾಲಯಗಳ ಜತೆಗೂ ಸಮನ್ವಯತೆ ಕೈಗೊಂಡು ಸೂಕ್ತ ಸಲಹೆ ಪಡೆದುಕೊಳ್ಳಬೇಕು. ಆ ಮೂಲಕ ಮಂಗಳೂರಿನಲ್ಲಿ ಮೆರಿಟೈಮ್ ವಿವಿ ಸ್ಥಾಪನೆಗೆ ಬೇಕಾಗುವ ಎಲ್ಲ ಪೂರ್ವ ಸಿದ್ಧತೆ ಕೈಗೊಂಡು ಅದು ಕಾರ್ಯರೂಪಕ್ಕೆ ಬರುವುದಕ್ಕೆ ಸೂಕ್ತ ಕ್ರಮವನ್ನು ಸಚಿವಾಲಯ ಕೈಗೊಳ್ಳಬೇಕು ಎಂದು ಕ್ಯಾ. ಚೌಟ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.