ಬೆಂಗಳೂರು,ಜು. 11 (DaijiworldNews/AK): ಒಂದು ದೇಶ- ಒಂದು ಚುನಾವಣೆ ಎಂಬುದು ದಿಢೀರ್ ಆಗಿ ಮಾಡಿದ ಪರಿಕಲ್ಪನೆಯಲ್ಲ; 1952ರಿಂದ 1967ರವರೆಗೆ ಇದು ಜಾರಿಯಲ್ಲಿತ್ತು. ಬಳಿಕ ಈ ಕುರಿತಂತೆ ಚರ್ಚೆಯೂ ನಡೆದಿತ್ತು ಎಂದು ತಮಿಳುನಾಡು ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ತಿಳಿಸಿದ್ದಾರೆ.

ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಕುರಿತು ಇಂದು “ಮತ್ತಿಕೆರೆಯ ಐ.ಐ.ಎಸ್.ಸಿ”ಯಲ್ಲಿ ಏರ್ಪಡಿಸಿದ ಸಂವಾದದಲ್ಲಿ ಅವರು ಮಾತನಾಡಿದರು. ದೇಶವು ವೇಗವಾಗಿ ಬೆಳವಣಿಗೆ ಸಾಧಿಸಬೇಕಿದೆ. ಇದಕ್ಕಾಗಿ ಚುನಾವಣಾ ವ್ಯವಸ್ಥೆಯಲ್ಲೂ ಸುಧಾರಣೆ ಅಗತ್ಯವಿದೆ ಎಂದು ಅವರು ನುಡಿದರು.
ಹಿಂದಿನ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಒಂದೇ ಚುನಾವಣೆ ಸಾಧ್ಯಾಸಾಧ್ಯತೆ ಕುರಿತು ಅದು ದೇಶಾದ್ಯಂತ ಅಭಿಪ್ರಾಯ ಸಂಗ್ರಹಿಸಿತ್ತು. ಅರ್ಧದಲ್ಲೇ ಒಂದು ಸರಕಾರ ಅಧಿಕಾರ ಕಳಕೊಂಡರೆ ಏನು ಮಾಡಬೇಕೆಂಬ ವಿಷಯದಲ್ಲೂ ಕೋವಿಂದ್ ಅವರ ಸಮಿತಿ ಶಿಫಾರಸನ್ನು ನೀಡಿದೆ ಎಂದು ಹೇಳಿದರು.
1980- 90ರ ನಡುವಿನ ಅವಧಿಯಲ್ಲಿ ಹೆಚ್ಚು ಸರಕಾರಗಳ ಪತನ ಆಗಿತ್ತು. 2000ನೇ ಇಸವಿಯ ಬಳಿಕ ಅದು ಕಡಿಮೆಯಾಗುತ್ತ ಸಾಗಿದೆ ಎಂದು ಹೇಳಿದರು. ಜನಸಂಖ್ಯೆಗೆ ಅನುಗುಣವಾಗಿ ಇದೀಗ ಸಂಸತ್ತಿನ ಸಂಸದರ ಸಂಖ್ಯೆಯೂ 543ರಿಂದ ಹೆಚ್ಚಾಗಲಿದೆ. ಮಹಿಳೆಯರಿಗೆ ಶೇ 33 ಮೀಸಲಾತಿಯೂ ಇರಲಿದೆ. ಜೊತೆಗೇ ಒಂದೇ ಚುನಾವಣೆಯೂ ಬರಬೇಕಿದೆ. 1971ರ ಜನಗಣತಿ ಪ್ರಕಾರ ಬೆಂಗಳೂರಿನ ಸಂಸದರ ಸಂಖ್ಯೆ 3 ಇದೆ. ಬೆಂಗಳೂರು ಈಗ ಸುಮಾರು 3 ಕೋಟಿ ಜನರನ್ನು ಹೊಂದಿ ದೊಡ್ಡ ನಗರವಾಗಿದೆ. ಸಹಜವಾಗಿ ಬೆಂಗಳೂರಿನ ಸಂಸದರ ಸಂಖ್ಯೆ ಐದೋ, ಆರೋ, ಏಳೋ ಆಗಬಹುದು ಎಂದು ತಿಳಿಸಿದರು.
ಇವಿಎಂ ಮತದಾನದ ವಿಷಯದಲ್ಲೂ ಕೇಸ್
ಸಂವಾದದಲ್ಲಿ ಉತ್ತರ ನೀಡಿದ ಅಣ್ಣಾಮಲೈ ಅವರು, ಇವಿಎಂ ಮತದಾನದ ವಿಚಾರದಲ್ಲೂ ಸುಪ್ರೀಂ ಕೋರ್ಟಿನಲ್ಲಿ ಕೇಸಿದೆ. ಇವಿಎಂ ಯಂತ್ರಕ್ಕೆ ಬ್ಲೂಟೂತ್ ಆಗಲೀ ವೈಫೈ ಆಗಲೀ ಇಲ್ಲ; ಅದರ ಸಂಬಂಧವೇ ಕೆಲವು ರಾಜಕೀಯ ಪಕ್ಷಗಳು ಕೋರ್ಟಿನ ಮೊರೆ ಹೋಗಿವೆ ಎಂದರು.
ಮಹಾರಾಷ್ಟ್ರ ಚುನಾವಣೆ ಸಂಬಂಧವೇ ಇದೇ ರೀತಿ ಹೇಳಲಾಗಿದೆ. ಸೋತ ಪಕ್ಷವು ಕಾರಣ ಹೇಳುವುದು ಸಹಜ. ಜಿಮ್ಗೆ ಹೋದವರು ಬಾಡಿ ಬರ್ತಾ ಇಲ್ಲ; ಉಪಕರಣ ಸರಿ ಇಲ್ಲ ಎಂದ ಹಾಗಾಗಿದೆ ಎಂದು ವಿಶ್ಲೇಷಿಸಿದರು. ಕರ್ನಾಟಕದಲ್ಲಿ ಶೇ 44ರಷ್ಟು ನಗರವಾಸಿಗಳಿದ್ದಾರೆ. ತಮಿಳುನಾಡಿನಲ್ಲಿ ಶೇ 50ರಷ್ಟು ನಗರವಾಸಿಗಳು. ಸಹಜವಾಗಿ ಸಂಸದರ ಸಂಖ್ಯೆಯೂ ಶೇ 50-50 ಆಗಲಿದೆ ಎಂದು ವಿವರಿಸಿದರು.
ಈಗ ತಮಿಳುನಾಡಿನಲ್ಲಿ ಶೇ 85 ಗ್ರಾಮೀಣ ಪ್ರದೇಶದ ಸಂಸದರಿದ್ದು, ಶೇ 15ರಷ್ಟು ನಗರ ಪ್ರದೇಶದ ಸಂಸದರಿದ್ದಾರೆ ಎಂದರು. ಈಗ ಶೇ 85ರಷ್ಟು ಗ್ರಾಮೀಣ ಪ್ರದೇಶಗಳಿಂದ ಆಯ್ಕೆಯಾದ ಸಂಸದರಿದ್ದು, ಉಳಿದ ಕೇವಲ ಶೇ 15ರಷ್ಟು ಸಂಸದರು ನಗರ ಪ್ರದೇಶದವರು. ಕ್ಷೇತ್ರಗಳ ಪುನರ್ ವಿಂಗಡಣೆ ಆದಾಗ ನಗರ ಪ್ರದೇಶದ ಹೆಚ್ಚು ಸಂಸದರು ಇರಲಿದ್ದಾರೆ ಎಂದು ವಿಶ್ಲೇಷಿಸಿದರು.