ಬೆಂಗಳೂರು, ಜು. 10 (DaijiworldNews/AA): ನಾಯಕತ್ವ ಬದಲಾವಣೆ ಡ್ರಾಮಾ ಅಷ್ಟೇ ಎಂದು ಗೃಹಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಾಯಕತ್ವದ ಬದಲಾವಣೆ ಚರ್ಚೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮಾಧ್ಯಮಗಳು ವಿಶ್ಲೇಷಣೆ ಮಾಡಿದಂತೆ ಇದೊಂದು ಡ್ರಾಮಾ. ನಿಮ್ಮ ಹೇಳಿಕೆಯನ್ನು ನಾನು ಒಪ್ಪಬೇಕಾಗುತ್ತೆ. ಪದೇ ಪದೇ ಇದರ ಬಗ್ಗೆ ಚರ್ಚೆ ಆಗುವುದು, ಅವರೊಂದು ಹೇಳಿಕೆ ಕೊಡುವುದು ನಾನೊಂದು ಹೇಳೋದು, ಮತ್ತೊಬ್ಬರು ಒಂದು ಹೇಳೋದು ಆಗಬಾರದು. ಆಡಳಿತದಲ್ಲಿ ಯಾವುದೇ ರೀತಿ ತೊಂದರೆ ಇಲ್ಲ. ಮುಖ್ಯಮಂತ್ರಿಗಳು ಆಡಳಿತ ಮಾಡುತ್ತಿದ್ದಾರೆ. ಸುಮ್ಮನೆ ಡ್ರಾಮಾ ಕಂಪನಿ ಓಪನ್ ಮಾಡೋಕೆ ನಂಗೆ ಇಷ್ಟವಿಲ್ಲ" ಎಂದಿದ್ದಾರೆ.
ನಾಯಕತ್ವದ ಬದಲಾವಣೆ ವಿಚಾರದ ಅಭಿಪ್ರಾಯಗಳನ್ನು ಗೌರವಿಸುತ್ತೇವೆ ಎಂಬ ಸುರ್ಜೇವಾಲಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಇದು ನನಗೆ ಗೊತ್ತಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡ್ತಾರೆ. ನಾನು ಸ್ಮೂತ್ ಆಗೇ ಇರೋದು, ಡ್ರಾಮಾ ಕಂಪನಿ ಓಪನ್ ಮಾಡೋಕೆ ಇಷ್ಟ ಇಲ್ಲ. ಅದನ್ನ ಬಿಟ್ಟುಬಿಡೋಣ, ನಮ್ಮ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಾರೆ. ಸಂದರ್ಭ ಬಂದಾಗ ತೀರ್ಮಾನ ಮಾಡುತ್ತಾರೆ. ಈಗ ಅಂತ ಸಂದರ್ಭ ಇದೆಯಾ ಅಂತ ನಾನು ಹೇಳೋಕೆ ಹೋಗಲ್ಲ" ಎಂದು ಹೇಳಿದ್ದಾರೆ.