ಇಂದೋರ್, ಜೂ. 11 (DaijiworldNews/AA): ಮೇಘಾಲಯ ಹನಿಮೂನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ರಾಜ ರಘುವಂಶಿಯ ಕೊಲೆಯಲ್ಲಿ ತನ್ನ ಪಾತ್ರವಿದೆ ಎಂದು ಆರೋಪಿ ಪತ್ನಿ ಸೋನಂ ರಘುವಂಶಿ ತಪ್ಪೊಪ್ಪಿಕೊಂಡಿದ್ದಾಳೆ.

ವಿಶೇಷ ತನಿಖಾ ತಂಡ ನಡೆಸಿದ ವಿಚಾರಣೆ ವೇಳೆ, ತನ್ನ ಪತಿಯನ್ನು ಕೊಲ್ಲುವ ಸಂಚಿನಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾಳೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಮುಖ್ಯವಾದ ಸಾಕ್ಷಿಗಳನ್ನು ಪ್ರಸ್ತುತಪಡಿಸಿದಾಗ ಸೋನಂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ನಿರ್ಧರಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು 10 ದಿನಗಳ ಕಸ್ಟಡಿಗೆ ಕೋರುವ ನಿರೀಕ್ಷೆಯಿದೆ. ಈ ಘಟನೆಗಳ ಪುನರ್ನಿರ್ಮಾಣಕ್ಕಾಗಿ ಆರೋಪಿಗಳನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ಯಲು ಸಹ ಪೊಲೀಸರು ಯೋಜನೆ ರೂಪಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಸೋನಂ ಬೇರೆಡೆಗೆ ಹೋಗುವ ಮೊದಲು ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಒತ್ತಾಯಿಸುವ ಮೂಲಕ ರಾಜನನ್ನು ಭಾವನಾತ್ಮಕವಾಗಿ ಒಲಿಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಗುವಾಹಟಿಗೆ ಮತ್ತು ನಂತರ ಮೇಘಾಲಯಕ್ಕೆ ಪ್ರಯಾಣಿಸಲು ಅವಳು ಅವನನ್ನು ಮನವೊಲಿಸಿದ್ದು, ಅಲ್ಲಿ ಅವನನ್ನು ಕೊಲೆ ಮಾಡಲಾಯಿತು. ಇದೆಲ್ಲವನ್ನೂ ಮದುವೆಯ ನಂತರ ಅವಳು ತನ್ನ ಪೋಷಕರ ಮನೆಯಲ್ಲಿದ್ದಾಗ ಪ್ಲಾನ್ ಮಾಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.