ಬೆಂಗಳೂರು, ಜೂ. 07 (DaijiworldNews/AK): ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ.

ಬೆಂಗಳೂರು ಕೊಟ್ಟಿಗೆ ಪಾಳ್ಯದ ನಿವಾಸಿ ಗಿರೀಶ್ ಕುಮಾರ್ ಎಂಬುವವರು ಸುದೀರ್ಘ ಪತ್ರದೊಂದಿಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಐಪಿಎಲ್-ಆರ್ಸಿಬಿ ವಿಜಯೋತ್ಸವಕ್ಕೆ ಸಾರ್ವಜನಿಕರನ್ನು ಸ್ವತಃ ಮುಖ್ಯಮಂತ್ರಿಗಳೇ ಆಹ್ವಾನಿಸಿದ್ದಾರೆ. ಸರಿಯಾದ ವ್ಯವಸ್ಥೆ ಮಾಡದೇ, ನಿರ್ಲಕ್ಷ್ಯ ವಹಿಸಿದ ಕಾರಣ ಅಮಾಯಕರ ಸಾವು-ನೋವಾಗಿದೆ. ಈ ಹಿನ್ನೆಲೆ ಸೂಕ್ತ ಕ್ರಮ ಜರುಗಿಸುವಂತೆ ಕೋರಿದ್ದಾರೆ.
ರಾಷ್ಟ್ರ, ರಾಜ್ಯಕ್ಕಾಗಿ ಆಡಿ ಪದಕ ಪಡೆದ ಅನೇಕ ಜನ ಆಟಗಾರರಿದ್ದಾರೆ. ಈ ಮಟ್ಟದಲ್ಲಿ ಸರ್ಕಾರಗಳಲ್ಲಿ ಆದ್ಯತೆ ಕೊಟ್ಟಿರುವುದಿಲ್ಲ. ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದ ಯೋಧರ ಮನೆಗೂ ಭೇಟಿ ಕೋಡಲು ಆಸಕ್ತಿ ತೋರಲ್ಲ. ಆದ್ರೆ ಈ ತಂಡಕ್ಕೆ ಸ್ವಾಗತ ಕೋರಿರುವುದು ಎಷ್ಟು ಸರಿ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅಮಾಯಕರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ