ಕೊಕ್ಕಡ, ಜೂ 14 (DaijiworldNews/MS): ಸೌತಡ್ಕ ಮಹಾ ಗಣಪತಿ ಬಯಲು ಆಲಯ ದೇವಸ್ಥಾನದ ಹಿಂಭಾಗದಲ್ಲಿ ಅಳವಡಿಸಿದ್ದ ಗೇಟ್ ನ್ನು ದ.ಕ. ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರರ ಉಪಸ್ಥಿತಿಯಲ್ಲಿ ಜೂ.13ರಂದು ತೆರವುಗೊಳಿಸಲಾಯಿತು.


ಕ್ಷೇತ್ರದ ರಕ್ಷಣೆಗಾಗಿ ವ್ಯವಸ್ಥಾಪನ ಸಮಿತಿ ಅನ್ನ ಛತ್ರದ ಬಳಿ ಸಾರ್ವಜನಿಕ ರಸ್ತೆಗೆ ವರ್ಷದ ಹಿಂದೆ ಗೇಟು ಹಾಕಿತ್ತು. ಇದರಿಂದ ಸಾರ್ವಜನಿಕರಿಗೆ ಅನಾನುಕೂಲತೆಯಾಗಿತ್ತು.
ಆದರೆ ರಸ್ತೆಗೆ ದೇವಸ್ಥಾನದ ವತಿಯಿಂದ ಗೇಟು ಅಳವಡಿಸಿರುವುದನ್ನು ಶ್ರೀಕೃಷ್ಣ ಭಟ್ ಸೇರಿದಂತೆ ಇತರರು ಆಕ್ಷೇಪ ವ್ಯಕ್ತಪಡಿಸಿ, ದ.ಕ ಜಿಲ್ಲಾಧಿಕಾರಿಗಳು ಮತ್ತು ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದರು. ದ.ಕ. ಜಿಲ್ಲಾಧಿಕಾರಿಗಳು ಸರಕಾರಿ ಸ್ಥಳದ ಮೂಲಕ ಸುಮಾರು 50 ವರ್ಷಗಳಿಂದ ಇದ್ದ ರಸ್ತೆಗೆ ಹಾಕಿದ ಗೇಟನ್ನು ಪರಿಶೀಲಿಸಿ, ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡುವಂತೆ ಸೂಚನೆ ನೀಡಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರ್ ಸುರೇಶ್ ಕುಮಾರ್, ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ ಹಾಗೂ ಗ್ರಾಮ ಕರಣಿಕರ ಉಪಸ್ಥಿತಿಯಲ್ಲಿ ರಸ್ತೆಗೆ ಹಾಕಲಾಗಿದ್ದ ಗೇಟನ್ನು ತೆರವುಗೊಳಿಸಲಾಯಿತು.