ಬಂಟ್ವಾಳ,ಜ 13 (Daijiworld News/MSP): ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಗ್ರಾಮ ದೈವಕ್ಕೆ ಸಂಬಂಧಪಟ್ಟಂತೆ 1001 ಗಣಗಳಿಗೆ “ವನಭೋಜನ ” ಕಾರ್ಯಕ್ರಮ ಜ.12ರ ಭಾನುವಾರ ಮಧ್ಯಾಹ್ನ ನಡೆಯಿತು. ಅನಾದಿಕಾಲದಿಂದಲೂ ನಡೆದುಕೊಂಡು ಬಂದಂತೆ ಪ್ರಸಿದ್ದ ’ಮಾಣಿ ಶ್ರೀ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆ ’ಯ ಮೊದಲು ಮಾಣಿ ಗ್ರಾಮದ ಉಳ್ಳಾಲ್ತಿ ದೇವಸ್ಥಾನದ ವಠಾರದಲ್ಲಿ ಹಾಗೂ ಅರೆಬೆಟ್ಟುವಿನಲ್ಲಿ ಒಂದೇ ದಿನ ’ವನಭೋಜನ ’ ಕಾರ್ಯಕ್ರಮ ನಡೆಯುತ್ತದೆ.



ಅರೆಬೆಟ್ಟು ಗುತ್ತುವಿನಲ್ಲಿ ವರ್ಷಂಪ್ರತಿಯಂತೆ ಜರಗುವ ಕಂಬಳಕೋರಿಯಂದು ಈ ಎರಡು ಗ್ರಾಮದ ವನಭೋಜನಕ್ಕೆ ದಿನ ನಿಗದಿಯಾಗುತ್ತದೆ. ಅ ಪ್ರಕಾರ ಒಂದೇ ದಿನ ಎರಡು ಕಡೆಗಳಲ್ಲೂ ವನಭೋಜನಕ್ಕೆ ಮೀಸಲಿರಿಸಿದ ಜಾಗದಲ್ಲಿ ಮಾಣಿಗುತ್ತು ಮತ್ತು ಅರೆಬೆಟ್ಟು ಗುತ್ತು ವಿನ ಮುಖ್ಯಸ್ಥ ರ ಮುಂದಾಳತ್ವ ದಲ್ಲಿ ಗ್ರಾಮಸ್ಥರ ಕೂಡುವಿಕೆಯಲ್ಲಿ ಜರಗುತ್ತದೆ.
ವನಭೋಜನ ಎಂದರೆ ಏನು: ದಿನನಿಗದಿಯಂತೆ ಗ್ರಾಮದ ಭಕ್ತರು ದೈವದ ಗಣಗಳಿಗೆ ಹರಕೆಯ ರೂಪದಲ್ಲಿ ಅಗೆಲು ಸೇವೆ ನೀಡುವುದು ಇದರ ಉದ್ದೇಶ. ಅ ದಿನದಂದು ಊರಿನ ಭಕ್ತರು ಹರಕೆಯ ರೂಪದಲ್ಲಿ ಕೋಳಿ , ಒಣ ಮೀನು, ಅಕ್ಕಿ, ತೆಂಗಿನಕಾಯಿ, ಹುರುಳಿ, ಇತ್ಯಾದಿಗಳನ್ನು ಹರಕೆಗೆಂದು ನೀಡುತ್ತಾರೆ. ಕಾಡಿನ ಮದ್ಯದಲ್ಲಿ ಭಕ್ತರು ಹರಕೆಯ ರೂಪದಲ್ಲಿ ನೀಡಿದ ವಸ್ತುಗಳನ್ನು ಅಲ್ಲೇ ತಯಾರಿಸಿ ಅಗೆಲು ರೂಪದಲ್ಲಿ ದೈವದ ಗಣಗಳಿಗೆ ಬಡಿಸಲಾಗುತ್ತದೆ. ಬಳಿಕ ಗ್ರಾಮಸ್ಥರು ಒಟ್ಟಿಗೆ ಪ್ರಸಾದದ ರೂಪದಲ್ಲಿ ಪಡೆದುಕೊಂಡು ಅಲ್ಲೇ ಕುಳಿತು ಊಟ ಮಾಡುತ್ತಾರೆ.