ಮಂಗಳೂರು,ಆ. 29 (DaijiworldNews/AK):ಇಲ್ಲಿನ ಕುಳೂರಿನಲ್ಲಿರುವ ಯೆನೆಪೋಯ ಪದವಿ ಕಾಲೇಜಿನ ಕ್ರೀಡಾ ವಿಜ್ಞಾನ ಮತ್ತು ಕ್ಷೇಮ ವಿಭಾಗದ ನೇತೃತ್ವದಲ್ಲಿ ಶನಿವಾರ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಯಿತು.



ದಿನಾಚರಣೆಯ ವಿಶೇಷ ಅಂಗವಾಗಿ ಸಂಸ್ಥೆಯು ಪ್ರಥಮ ಬಾರಿಗೆ 'ಮಹಿಳೆಯರ ಅಂತರ ಕಾಲೇಜು ಕಬಡ್ಡಿ ಚಾಂಪಿಯನ್ಷಿಪ್' ಹಾಗೂ 'ಪ್ರೊ ಕಬಡ್ಡಿ ಲೀಗ್- ಸೀಸನ್ 3' ಅನ್ನು ಆಯೋಜಿಸುವ ಮೂಲಕ ಕ್ರೀಡಾ ವಲಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಭಾರತೀಯ ಕಬಡ್ಡಿ ಆಟಗಾರ ಹಾಗೂ ಪ್ರೊ ಕಬಡ್ಡಿ ತರಬೇತುದಾರ ಜಗದೀಶ್ ಕುಂಬ್ಳೆ, "ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ಯೆನೆಪೋಯ ಸಮೂಹದ ಕಾರ್ಯ ಶ್ಲಾಘನೀಯ. ಯುವಜನರು ದೈಹಿಕ ದೃಢತೆ ಮತ್ತು ಆರೋಗ್ಯಕರ ಜೀವನಶೈಲಿಗಾಗಿ ಪ್ರತಿದಿನವೂ ಸಮಯ ವಿನಿಯೋಗಿಸಬೇಕು," ಎಂದು ಕರೆ ನೀಡಿದರು.
ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ವಿಶ್ವ ಕಬಡ್ಡಿ ಚಾಂಪಿಯನ್ ಧನಲಕ್ಷ್ಮಿ ಮಾತನಾಡಿ, "ಸಾಧಕರ ಯಶಸ್ಸಿನ ಹಿಂದೆ ನಿರಂತರ ಪರಿಶ್ರಮ, ಶಿಸ್ತು ಹಾಗೂ ಛಲ ಪ್ರಮುಖ ಪಾತ್ರ ವಹಿಸುತ್ತವೆ. ಈ ಗುಣಗಳು ಪ್ರತಿಯೊಬ್ಬರಿಗೂ ತಮ್ಮ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಲು ಪ್ರೇರಣೆಯಾಗಬೇಕು," ಎಂದರು.
ಇದೇ ವೇಳೆ ಕ್ರೀಡಾ ಕ್ಷೇತ್ರಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ಜಗದೀಶ್ ಕುಂಬ್ಳೆ ಹಾಗೂ ಧನಲಕ್ಷ್ಮಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಅಧ್ಯಕ್ಷೀಯ ಭಾಷಣ ಮಾಡಿದ ಯೆನೆಪೋಯ ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೊ. ಜೀವನ್ ರಾಜ್, ರಾಷ್ಟ್ರೀಯ ಶಿಕ್ಷಣ ನೀತಿಯಡಿಯ 'ಬಿಎ ಕ್ರೀಡಾ ಅಧ್ಯಯನ' ಪಠ್ಯಕ್ರಮದ ಮೂಲಕ ಯುವ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ, ಪ್ರಾಯೋಗಿಕ ಜ್ಞಾನ ಹಾಗೂ ಕ್ರೀಡಾ ದತ್ತು ಯೋಜನೆಗಳ ಮೂಲಕ ಉತ್ತೇಜನ ನೀಡಲು ವಿಶ್ವವಿದ್ಯಾಲಯ ಬದ್ಧವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶಕರಾದ ಸುಜಿತ್ ಹಾಗೂ ಯೆನೆಪೋಯ ಪದವಿ ಕಾಲೇಜಿನ ಉಪಪ್ರಾಂಶುಪಾಲರಾದ ನಾರಾಯಣ ಸುಕುಮಾರ್ ಎ. ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕರಾದ ಡಾ. ಆನಂದವೇಲು ಟಿ. ಎಂ. ಸ್ವಾಗತಿಸಿದರು. ಡಾ. ದೀಕ್ಷಿತಾ ಪ್ರಶಾಂತ್ ಮತ್ತು ಶ್ರೀನಿಧಿ ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಪಿನಾಕಿನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಧನುಷ್ ಬೇಗೂರು ಧನ್ಯವಾದ ಸಮರ್ಪಿಸಿದರು.
ಮಹಿಳಾ ಕಬಡ್ಡಿ ವಿಭಾಗದಲ್ಲಿ ಪದವಿ ಪೂರ್ವದ 6 ಹಾಗೂ ಪದವಿ ವಿಭಾಗದ 5 ಸೇರಿದಂತೆ ಒಟ್ಟು 11 ತಂಡಗಳು ಭಾಗವಹಿಸಲಿವೆ. ಹಾಗೆಯೇ ವೈಐಎಎಸ್ಸಿಎಂ ಪ್ರೊ ಕಬಡ್ಡಿ ಲೀಗ್ನ 3ನೇ ಆವೃತ್ತಿಯಲ್ಲಿ ಒಟ್ಟು 6 ತಂಡಗಳು ಶ್ರೇಷ್ಠ ಪ್ರದರ್ಶನ ನೀಡಲು ಕಣಕ್ಕಿಳಿಯಲಿವೆ