ಮಂಗಳೂರು, ಆ. 28 (DaijiworldNews/TA): ನಗರದ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಮಕ್ಕಳ ಶಾಲೆ ಮತ್ತು ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಪತ್ರಕರ್ತರಿಗೆ ರಕ್ಷಾ ಬಂಧನ ಕಟ್ಟಿ ಶುಭಾಶಯ ಕೋರಿದ ಅಪರೂಪದ ಕಾರ್ಯಕ್ರಮ ನಗರದ ಪತ್ರಿಕಾಭವನದಲ್ಲಿ ನಡೆಯಿತು.

ರಕ್ಷಾ ಬಂಧನದ ಅಂಗವಾಗಿ ಸಾನಿಧ್ಯ ಸಂಸ್ಥೆಯ ವಿಶೇಷ ಚೇತನ ಮಕ್ಕಳು ಮಂಗಳೂರು ನಗರದ ಪತ್ರಕರ್ತರನ್ನು ಭೇಟಿ ಮಾಡಿ, ರಾಖಿ ಕಟ್ಟಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಕ್ಕಳ ಮುಗ್ಧ ನಗು, ಪ್ರೀತಿ ಹಾಗೂ ಆತ್ಮೀಯತೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಸಮಾಜದಲ್ಲಿ ವಿಶೇಷ ಚೇತನ ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವುದು, ಅವರ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ.