ಬೆಳ್ತಂಗಡಿ, ಆ. 23 (DaijiworldNews/AA): ವ್ಯಕ್ತಿಯೋರ್ವರನ್ನು ಕೊಲ್ಲುವ ಉದ್ದೇಶದಿಂದ ಅವರ ದ್ವಿಚಕ್ರ ವಾಹನಕ್ಕೆ ತನ್ನ ಟಾಟಾ ಸುಮೊ ವಾಹನವನ್ನು ಢಿಕ್ಕಿಪಡಿಸಿದ ಆರೋಪದ ಮೇರೆಗೆ ಆರೋಪಿಯೋರ್ವನನ್ನು ಪೊಲೀಸರು ಆ.22 ರಂದು ಬಂಧಿಸಿದ್ದಾರೆ.

ಧರ್ಮಸ್ಥಳ ನಿವಾಸಿ ಶರತ್ (33) ಬಂಧಿತ ಆರೋಪಿ. ಆರೋಪಿಯ ವಿರುದ್ಧ ಬೆಳ್ತಂಗಡಿ ಕಲ್ಮಂಜ ನಿವಾಸಿ ಬಾಲಕೃಷ್ಣ (43) ಎಂಬುವವರು ದೂರು ನೀಡಿರುತ್ತಾರೆ.
ದೂರುದಾರರಾದ ಬಾಲಕೃಷ್ಣ ಅವರಿಗೆ ಆರೋಪಿ ಶರತ್ ಆತನ ಟಾಟಾ ಸುಮೊ ವಾಹನವನ್ನು ಢಿಕ್ಕಿಪಡಿಸಿ ಕೊಲ್ಲುವುದಾಗಿ ಕೆಲವು ತಿಂಗಳುಗಳ ಹಿಂದೆ ಬೆದರಿಸಿರುತ್ತಾನೆ. ಜು.30 ರ ಸಂಜೆ ಬಾಲಕೃಷ್ಣ ಅವರು ಕೆಲಸ ಮುಗಿಸಿಕೊಂಡು ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಆರೋಪಿಯು ಕೊಲ್ಲುವ ಉದ್ದೇಶದಿಂದ ತನ್ನ ಟಾಟಾ ಸುಮೊ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ಧರ್ಮಸ್ಥಳ ಗ್ರಾಮ ಕುರುಮಾನಿ ಕ್ರಾಸ್ ಬಳಿ ಬಾಲಕೃಷ್ಣ ಅವರ ದ್ವಿಚಕ್ರ ವಾಹನಕ್ಕೆ ಢಿಕ್ಕಿಪಡಿಸಿರುತ್ತಾನೆ. ಅಪಘಾತದ ಪರಿಣಾಮ ಬಾಲಕೃಷ್ಣ ಅವರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ದೂರುದಾರರಾದ ಬಾಲಕೃಷ್ಣ ಅವರು ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 52/2026, ಕಲಂ: 109 ಬಿಎನ್ಎಸ್ -2023 ರಂತೆ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದ ತನಿಖೆ ನಡೆಸಿದ ಧರ್ಮಸ್ಥಳ ಠಾಣಾ ಪೊಲೀಸರು ಆರೋಪಿ ಶರತ್ ನನ್ನು ಆ.28 ರಂದು ದಸ್ತಗಿರಿ ಮಾಡಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.