ಬೆಳ್ತಂಗಡಿ, ಜು. 19(DaijiworldNews/TA): ಮದ್ದಡ್ಕ ಸಮೀಪ ಬೈಕ್ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಬಂಟ್ವಾಳದ ಕಾಲೇಜೊಂದರ ವಿದ್ಯಾರ್ಥಿ, ಬಳ್ಳಮಂಜ ನಿವಾಸಿ ಕೌಶಿಕ್ ಗೌಡ (19 ) ಮೃತಪಟ್ಟ ಯುವಕ. ಹಿಂಬದಿ ಸವಾರ ಮಡಂತ್ಯಾರಿನ ಭರತ್ (20) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಚಲಿಸುತ್ತಿದ್ದ ವೇಳೆ ಸಂಪರ್ಕ ರಸ್ತೆಯಿಂದ ಸ್ಕೂಟಿ ಏಕಾಏಕಿ ಅಡ್ಡ ಬಂದಿರುವುದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪರಿಸರವು ಅಪಘಾತ ವಲಯವಾಗಿದ್ದು ಇಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.