ಪುತ್ತೂರು, ಜು. 18 (DaijiworldNews/AA): ಶಾಲಾ ಮಕ್ಕಳ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಅರುಣ್ ಕುಮಾರ್ ಅವರು ಅತ್ಯಾಧುನಿಕ 'ಸೂಪರ್ ಬಯೋಮೆಟ್ರಿಕ್' ಹಾಜರಾತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ವಿದ್ಯಾರ್ಥಿಗಳು ಶಾಲಾ ಆವರಣಕ್ಕೆ ಆಗಮಿಸಿದ ತಕ್ಷಣವೇ ಅವರ ಪೋಷಕರ ಮೊಬೈಲ್ಗೆ ಸಂದೇಶ ರವಾನಿಸುವ ಈ ತಂತ್ರಜ್ಞಾನ ರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ. ರಾಜ್ಯ ಸರ್ಕಾರದಿಂದ ನಗದು ಬಹುಮಾನ ಹಾಗೂ ಶಿಕ್ಷಣ ಇಲಾಖೆಯಿಂದ ಪ್ರಶಂಸೆಯನ್ನೂ ಪಡೆದಿದೆ.
ಮಕ್ಕಳು ಮನೆಯಿಂದ ಶಾಲೆಗೆ ತೆರಳಿದ ಬಳಿಕ ಮಧ್ಯದಲ್ಲೇ ತರಗತಿಯನ್ನು ತಪ್ಪಿಸುವಂತಹ ಘಟನೆಗಳನ್ನು ತಡೆಯುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಕ್ಯಾಮೆರಾ ಹಾಗೂ ಬಯೋಮೆಟ್ರಿಕ್ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳ ಹಾಜರಾತಿ ದಾಖಲಾಗುತ್ತಿದ್ದಂತೆಯೇ ಪೋಷಕರ ಮೊಬೈಲ್ಗೆ ಸ್ವಯಂಚಾಲಿತವಾಗಿ ಸಂದೇಶ ರವಾನೆಯಾಗುತ್ತದೆ. ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಯೊಬ್ಬರು ಇಂತಹ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದು ಎಲ್ಲೆಡೆಯಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.
ಈ ವ್ಯವಸ್ಥೆಯನ್ನು ಈಗಾಗಲೇ ಕೊಂಬೆಟ್ಟು ಸರ್ಕಾರಿ ಪ್ರೌಢಶಾಲೆಯಲ್ಲಿ ಅಳವಡಿಸಲಾಗಿದೆ. ಕೊಂಬೆಟ್ಟು ಪಿಯು ಕಾಲೇಜಿನ ಉಪಪ್ರಾಂಶುಪಾಲೆ ವಸಂತ ಮೂಲ್ಯ ಹಾಗೂ ಶಿಕ್ಷಕರಾದ ಆಶ್ಲೇಶ್ ಕುಮಾರ್ ಮತ್ತು ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ಅರುಣ್ ಕುಮಾರ್ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಬೊಳುವಾರು ನಿವಾಸಿಗಳಾದ ವಿನೋದ್ ಕುಮಾರ್ ಮತ್ತು ರಾಜೇಶ್ವರಿ ದಂಪತಿಯ ಪುತ್ರನಾದ ಅರುಣ್ ಕುಮಾರ್ ಪ್ರಸ್ತುತ ನಿಟ್ಟೆ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
ಯೋಜನೆಯ ಕುರಿತು ಮಾತನಾಡಿದ ಅರುಣ್ ಕುಮಾರ್, "ಈ ತಂತ್ರಜ್ಞಾನಕ್ಕೆ ಅಗತ್ಯವಾದ ಮಾಹಿತಿಯನ್ನು ಅಟಲ್ ಟಿಂಕರಿಂಗ್ ಲ್ಯಾಬ್ ಮೂಲಕ ಪಡೆದುಕೊಂಡಿದ್ದೇನೆ. ರಾಸ್ಪ್ಬೆರಿ ಪೈ 5 ಪ್ರೊಸೆಸರ್ ಬಳಸಿ ಸುಮಾರು 15,000 ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಫೋಟೋ ಬಳಸಿ ವಂಚನೆ ನಡೆಯದಂತೆ ತಡೆಯಲು ರೆಟಿನಾ ಸ್ಕ್ಯಾನರ್ ಅಳವಡಿಸಲಾಗಿದೆ. 2025ರ ಜೂನ್ 23ರಂದು ಶಾಸಕ ಅಶೋಕ್ ಕುಮಾರ್ ರೈ ಈ ವ್ಯವಸ್ಥೆಯನ್ನು ಉದ್ಘಾಟಿಸಿದ್ದರು. ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಸಂಗ್ರಹಿಸಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ" ಎಂದು ತಿಳಿಸಿದ್ದಾರೆ.
ಈ ಕುರಿತು ಕೊಂಬೆಟ್ಟು ಶಾಲೆಯ ಉಪಪ್ರಾಂಶುಪಾಲರು ಮಾತನಾಡಿ, "ಕಳೆದ ಆರು ತಿಂಗಳಿಂದ ಈ ತಂತ್ರಜ್ಞಾನವನ್ನು ಶಾಲೆಯಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಇನ್ನೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ಎಲ್ಲಾ ಪೋಷಕರ ಮೊಬೈಲ್ ಸಂಖ್ಯೆಗಳು ವ್ಯವಸ್ಥೆಗೆ ಜೋಡಣೆಯಾದ ಬಳಿಕ ವಿದ್ಯಾರ್ಥಿಗಳ ಮುಖದ ಗುರುತನ್ನು ದಾಖಲಿಸಿ ಸ್ವಯಂಚಾಲಿತವಾಗಿ ಸಂದೇಶ ಕಳುಹಿಸಲಾಗುತ್ತದೆ. ಮೂರು ತಿಂಗಳ ಹಿಂದೆ ಶಿಕ್ಷಣ ಇಲಾಖೆ ಈ ಯೋಜನೆ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಅರುಣ್ ಕುಮಾರ್ ಅವರನ್ನು ಆಹ್ವಾನಿಸಿತ್ತು" ಎಂದು ತಿಳಿಸಿದ್ದಾರೆ.