ಉಡುಪಿ,ಜು. 14 (DaijiworldNews/AK): ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಉಂಚಳ್ಳಿ ಬಳಿಯ ಮಾಸ್ತಿಜಡ್ಡಿ ಗ್ರಾಮದಲ್ಲಿ ಭಾನುವಾರ ಹೊಳೆಯಲ್ಲಿ ಈಜುತ್ತಿದ್ದ ಇಬ್ಬರು ಸಹೋದರರು ಮುಳುಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಹೊನ್ನಾವರ ನಿವಾಸಿಗಳಾದ ಮದನ್ ನಾಯಕ್ (16) ಮತ್ತು ಹರ್ಷ ನಾಯಕ್ (18) ಎಂದು ಗುರುತಿಸಲಾಗಿದೆ. ಹರ್ಷ ಬ್ರಹ್ಮಾವರದ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದ.
ವರದಿಗಳ ಪ್ರಕಾರ, ಸಹೋದರರು ಹೊಳೆಗೆ ಅಡ್ಡಲಾಗಿ ಇರುವ ಬಂಧಾರ (ಚೆಕ್ ಡ್ಯಾಮ್) ನಲ್ಲಿ ಈಜಲು ಹೋಗಿದ್ದಾಗ ಆಕಸ್ಮಿಕವಾಗಿ ಸುಮಾರು 15 ಅಡಿಗಳಷ್ಟು ಆಳವಾದ ನೀರಿನ ಭಾಗಕ್ಕೆ ಬಿದ್ದು ಮುಳುಗಿ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಶ್ರೀ ಮಾರಿಕಾಂಬಾ ರಕ್ಷಣಾ ತಂಡದ ಗೋಪಾಲಗೌಡ ನೇತೃತ್ವದ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಶವಗಳನ್ನು ಹೊರತೆಗೆದಿದ್ದಾರೆ.
ಬನವಾಸಿ ಪೊಲೀಸ್ ಠಾಣೆ ಪಿಎಸ್ಐ ಮಹಾಂತಪ್ಪ ಕುಂಬಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದರು. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶಿರಸಿಗೆ ಸಾಗಿಸಲಾಯಿತು. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಬ್ರಹ್ಮಾವರದ ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿದ್ಯಾರ್ಥಿ ಮತ್ತು ಅವರ ಕಿರಿಯ ಸಹೋದರನ ಅಕಾಲಿಕೆಗೆ ಸಂತಾಪ ಸೂಚಿಸಿದ್ದಾರೆ.