ಬಂಟ್ವಾಳ, ಜು. 12 (DaijiworldNews/AA): ಸುಮಾರು 26.18 ಕೋಟಿ ರೂ. ವೆಚ್ಚದಲ್ಲಿ ಬಂಟ್ವಾಳ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ. 2024 ರಲ್ಲಿ ಈ ಯೋಜನೆಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಜುಲೈ 17 ರಂದು ಈ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.




ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಅಮೃತ್ ಭಾರತ್ ಸ್ಟೇಷನ್ ಯೋಜನೆ'ಯ ಎರಡನೇ ಹಂತದ ಅಡಿಯಲ್ಲಿ ಈ ನಿಲ್ದಾಣವನ್ನು ನವೀಕರಿಸಲಾಗಿದೆ. ನೈಋತ್ಯ ರೈಲ್ವೆ ವಲಯದಲ್ಲಿ ಈ ಯೋಜನೆಯಡಿ ಆಧುನೀಕರಣಗೊಂಡಿರುವ ನಾಲ್ಕು ನಿಲ್ದಾಣಗಳಲ್ಲಿ ಬಂಟ್ವಾಳವೂ ಒಂದು.
ಈ ಯೋಜನೆಯ ಮೂಲಕ ಬಂಟ್ವಾಳ ರೈಲು ನಿಲ್ದಾಣವು ಅತ್ಯಾಧುನಿಕ ಮೂಲಸೌಕರ್ಯ ಮತ್ತು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಹೊಂದಿರುವ ಆಧುನಿಕ ಸಾರಿಗೆ ಕೇಂದ್ರವಾಗಿ ಮಾರ್ಪಟ್ಟಿದೆ. ನಿಲ್ದಾಣದ ಕಾಯುವಿಕೆ ಕೊಠಡಿ, ಟಿಕೆಟ್ ಕೌಂಟರ್ಗಳ ನವೀಕರಣ, ಸುಧಾರಿತ ಆಸನ ವ್ಯವಸ್ಥೆ, ಸುಗಮ ಸಂಚಾರಕ್ಕಾಗಿ ಪ್ರತ್ಯೇಕ ವಾಹನ ನಿಲುಗಡೆ ಮತ್ತು ಪಿಕಪ್-ಡ್ರಾಪ್ ವಲಯಗಳನ್ನು ನಿರ್ಮಿಸಲಾಗಿದೆ.
ಇದರೊಂದಿಗೆ ಫ್ಲಾಟ್ಫಾರ್ಮ್ ಶೆಲ್ಟರ್ಗಳು, ಸುಧಾರಿತ ಮೇಲ್ಮೈ, ಆಧುನಿಕ ಪೀಠೋಪಕರಣಗಳು, ಎಲ್ಇಡಿ ದೀಪಗಳು, ಸುಂದರವಾದ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ನಿಲ್ದಾಣದ ಸೌಂದರ್ಯವನ್ನು ಹೆಚ್ಚಿಸಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಇನ್ಫಾರ್ಮೇಶನ್ ಬೋರ್ಡ್ಗಳು, ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಮತ್ತು ಗಡಿಯಾರಗಳಂತಹ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ದೇಶಾದ್ಯಂತ 75 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಅವೆಲ್ಲವನ್ನೂ ಜುಲೈ 17 ರಂದು ಪ್ರಧಾನಿ ಮೋದಿ ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ.