ಬಂಟ್ವಾಳ, ಮೇ. 31 (DaijiworldNews/AA): ಬಂಟ್ವಾಳ ತಾಲೂಕಿನಾದ್ಯಂತ ಭಾನುವಾರ ಸಂಜೆ ಹಠತ್ತಾಗಿ ಬೀಸಿದ ಬಿರುಗಾಳಿ, ಸಿಡಿಲು ಮತ್ತು ಭಾರಿ ಮಳೆಗೆ, ಮರಗಳು ಉರುಳಿಬಿದ್ದು ದೇವಸ್ಥಾನ ಹಾಗೂ ಹಲವು ಮನೆಗಳು ಜಖಂಗೊಂಡಿವೆ.



ದಿನವಿಡೀ ಇದ್ದ ಬಿರು ಬಿಸಿಲಿನ ನಂತರ ಸಂಜೆ ವೇಳೆಗೆ ವಾತಾವರಣ ದಿಢೀರ್ ಬದಲಾಗಿದ್ದು, ಮಂಚಿ, ಬೋಳಂತೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಧ್ಯಾಹ್ನ 3:30 ರ ಸುಮಾರಿಗೆ ಭಾರಿ ಸಿಡಿಲು, ಬಿರುಗಾಳಿ ಸಹಿತ ಮಳೆ ಆರಂಭವಾಯಿತು.
ಮಂಚಿ ಗ್ರಾಮದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪದಲ್ಲಿದ್ದ, ಸುಮಾರು ಒಂದು ಶತಮಾನಕ್ಕೂ ಹೆಚ್ಚು ಹಳೆಯದು ಎನ್ನಲಾದ ತೆಂಗಿನ ಮರ ಬಿರುಗಾಳಿಯ ರಭಸಕ್ಕೆ ಬುಡಸಮೇತ ಉರುಳಿ ದೇವಸ್ಥಾನದ ಸಭಾಂಗಣದ ಮೇಲ್ಛಾವಣಿಯ ಮೇಲೆ ಬಿದ್ದಿದೆ. ಪರಿಣಾಮವಾಗಿ ಸಭಾಂಗಣದ ಸಿಮೆಂಟ್ ಶೀಟ್ಗಳ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ.
ಮರ ಬಿದ್ದ ಸಮಯದಲ್ಲಿ ಸಭಾಂಗಣದ ಒಳಗೆ ಯಾರೂ ಇಲ್ಲದ ಕಾರಣ ಭಾರಿ ದುರಂತವೊಂದು ತಪ್ಪಿದೆ. ಆದರೆ, ಘಟನೆ ನಡೆದ ಸಮಯದಲ್ಲಿ ದೇವಸ್ಥಾನದ ಆವರಣದ ಪಕ್ಕದ ಮತ್ತೊಂದು ಸಭಾಂಗಣದಲ್ಲಿ ಸ್ಥಳೀಯ ಭಕ್ತರು ಮತ್ತು ದೇವಸ್ಥಾನದ ಸಮಿತಿಯ ಸದಸ್ಯರು ಸಭೆಯೊಂದರಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಯ ಪ್ರಾಥಮಿಕ ಅಂದಾಜು ಮಾಡಿದ್ದಾರೆ.
ಬೋಳಂತೂರು ಗ್ರಾಮದ ದಾಸಮದಕದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಲಲಿತಾ ತಿಮ್ಮಪ್ಪ ರನ್ಯ ಅವರ ಮನೆಯ ಮೇಲೆ ಮರ ಬಿದ್ದು ಕಟ್ಟಡಕ್ಕೆ ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಬಾಳ್ತಿಲ ಗ್ರಾಮದ ಕಲ್ಲಾಪಪು ಎಂಬಲ್ಲಿ ನಾನ್ಯಪ್ಪ ಪೂಜಾರಿ ಎಂಬುವವರ ನಿವಾಸದ ಮೇಲೆ ತೆಂಗಿನ ಮರ ಬಿದ್ದಿದ್ದು, ಮನೆ ಜಖಂಗೊಂಡಿದೆ.
ಸಂಜೆ ವೇಳೆ ಬಿಸಿ ರೋಡ್ ಹಾಗೂ ಬಂಟ್ವಾಳ ತಾಲೂಕಿನ ಇತರೆಡೆ ಮೋಡ ಕವಿದ ವಾತಾವರಣವಿತ್ತು. ನಂತರ ರಾತ್ರಿ 7:30 ರ ಸುಮಾರಿಗೆ ಭಾರಿ ಗಾಳಿ ಸಹಿತ ಸುರಿದ ಮಳೆ ಸುಮಾರು ಒಂದು ಗಂಟೆಯ ಕಾಲ ಅಬ್ಬರಿಸಿತು. ಇದರಿಂದಾಗಿ ಸಾರ್ವಜನಿಕ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಹಲವು ಪ್ರದೇಶಗಳಲ್ಲಿ ಹಾನಿ ಸಂಭವಿಸಿದೆ.