ಕಾರ್ಕಳ, ಮೇ. 31 (DaijiworldNews/AA): ಪ್ರಕೃತಿ ಪ್ರೇಮಿಗಳು ಮತ್ತು ಚಾರಣಿಗರಿಗೆ ಅರಣ್ಯ ಇಲಾಖೆಯು ಸಿಹಿ ಸುದ್ದಿ ನೀಡಿದೆ. ಜೂನ್ 1 ರಿಂದ ಕುದುರೆಮುಖ, ಗಂಗಡಿಕಲ್, ನೇತ್ರಾವತಿ ಮತ್ತು ಕುರಿಂಜಾಲ್ ಬೆಟ್ಟಗಳಿಗೆ ಚಾರಣ ಕೈಗೊಳ್ಳಲು ಅರಣ್ಯ ಇಲಾಖೆಯು ನಿಯಂತ್ರಿತ ಷರತ್ತುಗಳೊಂದಿಗೆ ಅಧಿಕೃತವಾಗಿ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಅವರು, "ಎಲ್ಲಾ ಚಾರಣಿಗರು ಅರಣ್ಯ ಇಲಾಖೆಯ ಅರಣ್ಯ ವಿಹಾರ ಪೋರ್ಟಲ್ ಮೂಲಕವೇ ಆನ್ಲೈನ್ ಬುಕಿಂಗ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳ ಅನ್ವಯವೇ ಚಾರಣ ಚಟುವಟಿಕೆಗಳು ನಡೆಯಲಿವೆ" ಎಂದು ಮಾಹಿತಿ ನೀಡಿದ್ದಾರೆ.
ಉಳಿದಂತೆ ಈ ಭಾಗದ ಇತರ ಪ್ರಮುಖ ಚಾರಣ ತಾಣಗಳನ್ನು ಜೂನ್ 15 ರ ನಂತರ ಹಂತ-ಹಂತವಾಗಿ ಮುಕ್ತಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚಾರಣಿಗರ ಸುರಕ್ಷತೆ ಮತ್ತು ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು, ವಿವಿಧ ಚಾರಣ ಮಾರ್ಗಗಳಲ್ಲಿ 300 ತರಬೇತಿ ಪಡೆದ ಸ್ಥಳೀಯ ಮಾರ್ಗದರ್ಶಕರನ್ನು ನಿಯೋಜಿಸಲಾಗಿದೆ. ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸಲು ಇವರಿಗೆ ವಾಕಿ-ಟಾಕಿ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಅತ್ಯಗತ್ಯ ಸುರಕ್ಷತಾ ಪರಿಕರಗಳನ್ನು ನೀಡಲಾಗಿದೆ.
ಚಾರಣಿಗರು ದಟ್ಟ ಅರಣ್ಯದಲ್ಲಿ ದಾರಿ ತಪ್ಪುವುದನ್ನು ತಡೆಯಲು ಚಾರಣ ಮಾರ್ಗಗಳ ಉದ್ದಕ್ಕೂ ಮಾರ್ಗದರ್ಶಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ, ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗಗಳ ವಿವರಗಳು ಮತ್ತು ಸುರಕ್ಷತಾ ಸೂಚನೆಗಳನ್ನು ಒಳಗೊಂಡಿರುವ ಕೈಪಿಡಿಗಳನ್ನು ಸಹ ವಿತರಿಸಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.