ಮಂಗಳೂರು, ಮೇ. 13 (DaijiworldNews/AA): 23 ಲಕ್ಷ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಗೆ ತೊಂದರೆಯಾಗಿದ್ದು, ಪ್ರಶ್ನೆ ಪತ್ರಿಕೆಯ ಸೋರಿಕೆ ದೊಡ್ಡ ಮಾಫಿಯಾದಂತಿದೆ ಎಂದು ಐವನ್ ಡಿ'ಸೋಜಾ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಹಿಂದೆಯೂ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು, ರಾಜ್ಯ ಸರ್ಕಾರ ನೀಟ್ ಪರೀಕ್ಷೆಯಿಂದ ಹೊರಬಂದು ರಾಜ್ಯದ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಗಳ ಮೂಲಕ ಈ ಹಿಂದೆ ಇದ್ದ ಕ್ರಮದಂತೆ ಮೆಡಿಕಲ್ ಸೀಟುಗಳನ್ನು ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದಲ್ಲಿ ನೀಡಬೇಕೆಂದು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ" ಎಂದು ಹೇಳಿದರು.
"ಸುಪ್ರೀಂ ಕೋರ್ಟ್ ಆದೇಶದಂತೆ ನೀಟ್ ಪರೀಕ್ಷೆ ಮಾಡಲೇಬೇಕೆಂಬ ಆದೇಶವಿದ್ದರೂ, ದೇಶಾದಾದ್ಯಂತ ವಿದ್ಯಾರ್ಥಿಗಳಿಗೆ ಮೋಸ ಮತ್ತು ಮಾಫಿಯದ ಇದೊಂದು ವ್ಯಾಪಾರೀಕರಣ ವಾಗಿದೆ. ದೇಶದಲ್ಲಿ 26 ಲಕ್ಷ ವಿದ್ಯಾರ್ಥಿಗಳಿಗೆ ಉಂಟಾದ ಅನ್ಯಾಯದ ಬಗ್ಗೆ ಸರಿಯಾದ ಕಾನೂನು ಕ್ರಮವನ್ನು ಕೇಂದ್ರ ಸರ್ಕಾರ ಕೂಡಲೇ ಪ್ರವೇಶ ಮಾಡಿ ಆಯಾ ರಾಜ್ಯಕ್ಕೆ ಬಿಟ್ಟುಕೊಟ್ಟು ನ್ಯಾಯ ಒದಗಿಸಿಕೊಡಬೇಕು" ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
"ರಾಜ್ಯದಲ್ಲಿ 2 ಬಾರಿ ನೀಟ್ ಬಗ್ಗೆ ಸದನದಲ್ಲಿ ಗಮನ ಸೆಳೆಯುವ ಪ್ರಶ್ನೆಮೂಲಕ ರಾಜ್ಯಸರ್ಕಾರದ ಗಮನ ಸೆಳೆದಿದ್ದು, ನೀಟ್ ಒಂದು ಅಘಾತಕಾರಿ ಮಾಫಿಯಾವಾಗಿದ್ದು, ಮೆರಿಟ್ ಆಧಾರಿತ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಜೊತೆಗೆ ಗ್ರಾಮಾಂತರ ವಿದ್ಯಾರ್ಥಿಗಳಿಗೆ ನೀಟ್ ತರಬೇತಿ ಇಲ್ಲದೆ ಗ್ರಾಮಾಂತರ ವೈದ್ಯ ವಿದ್ಯಾರ್ಥಿಗಳಿಗೆ ಕನಸಿಗೆ ಹಿನ್ನೆಡೆಯಾಗಿದೆ. ಅಲ್ಲದೇ ಕರ್ನಾಟಕ ರಾಜ್ಯದಲ್ಲಿ ಈ ಮಾಫಿಯಾದ ಮೂಲಕ ಮೆರಿಟ್ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರಾದ ಮತ್ತು ಡಾ|ಶರಣ ಪ್ರಕಾಶ್ ಪಾಟೀಲರವರನ್ನು ಮತ್ತು ಮುಖ್ಯಮಂತ್ರಿಗಳನ್ನು ಇವರುಗಳು ಕೂಡಲೇ ಕೇಂದ್ರವನ್ನು ಸಂಪರ್ಕಿಸಿ ವೈದ್ಯಕೀಯ ವಿದ್ಯಾರ್ಥಿಗಳ ಬಗ್ಗೆ ಕ್ರಮ ಕೈಗೊಳ್ಳಬೇಕು" ಎಂದಿದ್ದಾರೆ.