ಮಂಗಳೂರು, ಫೆ. 15 (DaijiworldNews/TA): ಮಹಾ ಶಿವರಾತ್ರಿ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯ ವತಿಯಿಂದ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಹೋತ್ಸವವನ್ನು ಮಂಗಳೂರಿನ ಕದ್ರಿ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಆಧ್ಯಾತ್ಮಿಕ ಪ್ರದರ್ಶನದಲ್ಲಿ ಭಾರತ ದೇಶದ ವಿವಿಧ ಭಾಗಗಳಲ್ಲಿ ಇರುವ ಹನ್ನೆರಡು ಜ್ಯೋತಿರ್ಲಿಂಗಗಳ ಪ್ರತಿರೂಪಗಳನ್ನು ನಿರ್ಮಿಸಿ, ಭಕ್ತರಿಗೆ ಒಂದೇ ಸ್ಥಳದಲ್ಲಿ ದರ್ಶನ ಸಿಗುವಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಉತ್ತರಾಖಂಡದ ಹಿಮಾಲಯ ಪರ್ವತಶ್ರೇಣಿಗಳ ತಟದಲ್ಲಿ ಅಲಂಕರಿಸಿರುವ ಪವಿತ್ರ ಕ್ಷೇತ್ರವಾದ ಕೇದಾರನಾಥ ಜ್ಯೋತಿರ್ಲಿಂಗ ಭಕ್ತರಲ್ಲಿಯೇ ವಿಶಿಷ್ಟ ಭಕ್ತಿಭಾವ ಮೂಡಿಸುವ ತಾಣವಾಗಿದೆ. ಪ್ರಕೃತಿ ವೈಭವದ ಮಧ್ಯೆ ನೆಲೆಸಿರುವ ಕೇದಾರನಾಥ ಶಿವಲಿಂಗವು ತಪಸ್ಸು, ತ್ಯಾಗ ಮತ್ತು ಶುದ್ಧತೆಯ ಸಂಕೇತವಾಗಿದೆ.
ಮಾನವ ಜೀವನವನ್ನು ಪವಿತ್ರ ಮಾರ್ಗದತ್ತ ಕೊಂಡೊಯ್ಯುವ ಶಕ್ತಿಯ ಪ್ರತೀಕವಾಗಿ ಇದನ್ನು ಕಾಣಲಾಗುತ್ತದೆ. ಇನ್ನೊಂದು ಪವಿತ್ರ ಜ್ಯೋತಿರ್ಲಿಂಗವಾದ ಗ್ರೀಷ್ಣೇಶ್ವರ ಜ್ಯೋತಿರ್ಲಿಂಗ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿದೆ. ಭಕ್ತರ ಅಪಾರ ನಂಬಿಕೆಯ ಕೇಂದ್ರವಾಗಿರುವ ಈ ಕ್ಷೇತ್ರವು ಶಿವಭಕ್ತಿಯ ಮಹತ್ವವನ್ನು ಸಾರುತ್ತದೆ. ಸಂಕಷ್ಟದಲ್ಲಿರುವ ಭಕ್ತರಿಗೆ ಆತ್ಮಶಾಂತಿ ಹಾಗೂ ಧೈರ್ಯ ನೀಡುವ ತಾಣವಾಗಿ ಗ್ರೀಷ್ಣೇಶ್ವರ ಪ್ರಸಿದ್ಧಿ ಪಡೆದಿದೆ. ಕಾರ್ಯಕ್ರಮದಲ್ಲಿ ಶಿವತತ್ತ್ವದ ಆಧ್ಯಾತ್ಮಿಕ ಅರ್ಥವನ್ನೂ ವಿವರಿಸಲಾಯಿತು. ಪರಮಾತ್ಮ ನಿರಾಕಾರ ಶಿವಪಿತನು ಮಾನವನನ್ನು ದೇವತೆಗೊಳಿಸುವ ಮಾರ್ಗದರ್ಶನ ನೀಡುತ್ತಾನೆ ಎಂಬ ಸಂದೇಶವನ್ನು ಶಿವಲಿಂಗ ರೂಪವು ಸಾರುತ್ತದೆ ಎಂದು ವಕ್ತಾರರು ತಿಳಿಸಿದರು.
ಶಿವರಾತ್ರಿ ಸಂದರ್ಭದಲ್ಲಿ ಉಪವಾಸ, ಧ್ಯಾನ ಮತ್ತು ಸಕಾರಾತ್ಮಕ ಚಿಂತನೆಗಳ ಮೂಲಕ ಆತ್ಮೋನ್ನತಿ ಸಾಧಿಸಬೇಕೆಂದು ಆಯೋಜಕರು ಕರೆ ನೀಡಿದರು. ಕದ್ರಿ ಮೈದಾನದಲ್ಲಿ ನಡೆಯುತ್ತಿರುವ ಈ ದರ್ಶನ ಮಹೋತ್ಸವಕ್ಕೆ ನೂರಾರು ಭಕ್ತರು ಭೇಟಿ ನೀಡಿ ಆಧ್ಯಾತ್ಮಿಕ ಅನುಭವವನ್ನು ಪಡೆಯುತ್ತಿದ್ದಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಧ್ಯಾನ ಶಿಬಿರಗಳು ಮತ್ತು ಆಧ್ಯಾತ್ಮಿಕ ಉಪನ್ಯಾಸಗಳು ಸಹ ಆಯೋಜಿಸಲಾಗಿದೆ.