ಮಂಗಳೂರು, ಫೆ. 12 (DaijiworldNews/AA): ಬಾಲ್ ಒಳಗೆ ಅಳವಡಿಸಿದ ಗೆಜ್ಜೆಯ ಶಬ್ದವನ್ನು ಆಧಾರ ಮಾಡಿಕೊಂಡು ಬ್ಯಾಟಿಂಗ್-ಫೀಲ್ಡಿಂಗ್ ನಡೆಸುವ ಅಂಧರ ಕ್ರಿಕೆಟ್ ಪಂದ್ಯಾವಳಿಯು ಲಯನ್ಸ್ ಕ್ಲಬ್ ವೆಲೆನ್ಸಿಯ ವತಿಯಿಂದ ಸಿ.ಒ.ಡಿ.ಪಿ. ಮಂಗಳೂರು ಧರ್ಮಪ್ರಾಂತ್ಯದ ಸಹಯೋಗದೊಂದಿಗೆ ಮಂಗಳೂರಿನಲ್ಲಿ ಜರುಗಿತು. ಈ ಹೈಸ್ಕೂಲ್ ಮಟ್ಟದ ಟೂರ್ನಿಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಹಾಗೂ ಮೈಸೂರು ಜಿಲ್ಲೆಗಳ ನಾಲ್ಕು ತಂಡಗಳು ಭಾಗವಹಿಸಿ ಕ್ರೀಡಾ ಕೌಶಲ್ಯ ಪ್ರದರ್ಶಿಸಿವೆ.






ಪಂದ್ಯಾವಳಿ ಆರು ಓವರ್ ಮಾದರಿಯಲ್ಲಿ ನಡೆಯಿತು. ದೃಷ್ಟಿಹೀನ ಕ್ರಿಕೆಟ್ನಲ್ಲಿ ಅನುಸರಿಸುವ ನಿಯಮಾವಳಿಯಂತೆ ಪ್ರತಿಯೊಂದು ತಂಡದಲ್ಲೂ ಬಿ-1 (ಪೂರ್ಣ ದೃಷ್ಟಿಹೀನ), ಬಿ-2 ಮತ್ತು ಬಿ-3 (ಭಾಗಶಃ ದೃಷ್ಟಿದೋಷ ಹೊಂದಿದವರು) ವಿಭಾಗದ ಆಟಗಾರರು ಕಡ್ಡಾಯವಾಗಿ ಸೇರಿರಬೇಕು. ಪ್ಲೇಯಿಂಗ್ ಇಲೆವೆನ್ನಲ್ಲಿ ನಾಲ್ಕು ಮಂದಿ ಬಿ-1, ನಾಲ್ಕು ಮಂದಿ ಬಿ-2 ಹಾಗೂ ಮೂವರು ಬಿ-3 ಆಟಗಾರರ ಸಮನ್ವಯ ಕಡ್ಡಾಯವಾಗಿದೆ.
ಈ ಕ್ರಿಕೆಟ್ನ ವಿಶೇಷತೆ ಎಂದರೆ ಬಾಲ್ ಒಳಗೆ ಗೆಜ್ಜೆ ಅಳವಡಿಸಲಾಗಿದ್ದು, ಬಾಲ್ ಎಸೆಯುವಾಗ ಹಾಗೂ ಬ್ಯಾಟಿಂಗ್ ಮಾಡುವಾಗ ಶಬ್ದದ ಆಧಾರದಲ್ಲೇ ಆಟ ನಡೆಯುತ್ತದೆ. ಬೌಲಿಂಗ್ ಅಂಡರ್ ಆರ್ಮ್ ವಿಧಾನದಲ್ಲಿ ನಡೆಯುತ್ತದೆ. ಬಾಲ್ ಎಸೆಯುವ ಮೊದಲು ಬೌಲರ್ ಶಬ್ದ ಸೂಚನೆ ನೀಡುವುದು ನಿಯಮವಾಗಿದೆ. ಬಿ-1 ಆಟಗಾರರಿಗೆ ಸಬ್ಸ್ಟಿಟ್ಯೂಟ್ ರನ್ನಿಂಗ್ ಸೌಲಭ್ಯವಿದ್ದು, ಅವರು ಗಳಿಸುವ ಒಂದು ರನ್ಗೆ ಎರಡು ರನ್ಗಳಂತೆ ಲೆಕ್ಕಿಸುವ ವಿಶೇಷ ನಿಯಮವೂ ಜಾರಿಯಲ್ಲಿದೆ. ಬಿ-2 ಮತ್ತು ಬಿ-3 ಆಟಗಾರರಿಗೆ ಸಾಮಾನ್ಯ ರನ್ ಲೆಕ್ಕವೇ ಅನ್ವಯಿಸುತ್ತದೆ.
ಈ ಟೂರ್ನಿಯು 1997ರಲ್ಲಿ ಮಂಗಳೂರಿನಲ್ಲಿ ಆರಂಭವಾಗಿತ್ತು. ಬಳಿಕ ಸುಮಾರು 25 ವರ್ಷಗಳ ವಿರಾಮದ ನಂತರ ಕಳೆದ ವರ್ಷ ಮಂಗಳೂರಿನ ಕರಾವಳಿ ಮೈದಾನದಲ್ಲಿ ಪುನಃ ಪ್ರಾರಂಭಿಸಲಾಯಿತು. ಈ ಬಾರಿ ಕರ್ನಾಟಕದ ಎಂಟು ಸಂಸ್ಥೆಗಳಿಗೆ ಆಹ್ವಾನ ಕಳುಹಿಸಲಾಗಿದ್ದರೂ, ನಾಲ್ಕು ತಂಡಗಳು ಅಂತಿಮವಾಗಿ ಭಾಗವಹಿಸಿವೆ.
ಪಾಲ್ಗೊಂಡ ತಂಡಗಳ ಪ್ರಯಾಣ, ವಸತಿ ಹಾಗೂ ಊಟ ವ್ಯವಸ್ಥೆಯನ್ನು ಆಯೋಜಕರು ವಹಿಸಿಕೊಂಡಿದ್ದರು. ಸುಮಾರು 80ಕ್ಕೂ ಹೆಚ್ಚು ಸದಸ್ಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವಿಜೇತ ತಂಡಕ್ಕೆ 20,000 ರೂ. ಹಾಗೂ ರನ್ನರ್-ಅಪ್ ತಂಡಕ್ಕೆ 15,000 ರೂ. ನಗದು ಬಹುಮಾನ ಘೋಷಿಸಲಾಯಿತು.
ಈ ಬಗ್ಗೆ ಮಾತನಾಡಿದ ಆಯೋಜಕ ಲೆಸ್ಲಿ ಡಿಸೋಜ ಅವರು, "ನಾವು ಲಯನ್ಸ್ ಕ್ಲಬ್ ವತಿಯಿಂದ 1997ರಲ್ಲಿ ಈ ಅಂಧ ಮಕ್ಕಳ ಕ್ರಿಕೆಟ್ ಪಂದ್ಯಾವಳಿಯನ್ನು ಆರಂಭಿಸಿದ್ದೆವು. ಮಧ್ಯದಲ್ಲಿ ಸುಮಾರು 25 ವರ್ಷಗಳ ವಿರಾಮವಿತ್ತು. ಕಳೆದ ವರ್ಷ ಮಂಗಳೂರಿನಲ್ಲಿ ಮತ್ತೆ ಪ್ರಾರಂಭಿಸಿದ್ದೇವೆ. ಈ ವರ್ಷ ಎಂಟು ಸಂಸ್ಥೆಗಳಿಗೆ ಆಹ್ವಾನ ಕಳುಹಿಸಿದ್ದರೂ, ನಾಲ್ಕು ತಂಡಗಳು ಭಾಗವಹಿಸಿವೆ. ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಿಂದ ತಂಡಗಳು ಬಂದಿವೆ. ಅವರ ಪ್ರಯಾಣ, ವಸತಿ ಮತ್ತು ಊಟ ವ್ಯವಸ್ಥೆಯನ್ನು ನಾವು ನೋಡಿಕೊಂಡಿದ್ದೇವೆ. ಬಿ-1 ಆಟಗಾರರು ಒಂದು ರನ್ ಗಳಿಸಿದರೆ ಅದನ್ನು ಎರಡು ರನ್ ಎಂದು ಲೆಕ್ಕಿಸಲಾಗುತ್ತದೆ. ವಿಜೇತರಿಗೆ ನಗದು ಬಹುಮಾನ ನೀಡುತ್ತಿದ್ದೇವೆ" ಎಂದು ಹೇಳಿದರು.
ಆಟಗಾರ ಸ್ಪಂದನ್ ಮಾತನಾಡಿ, "ನಾನು ದೀಪ್ ಅಕಾಡೆಮಿ, ಬೆಂಗಳೂರು ಶಾಲೆಯಿಂದ ಬಂದಿದ್ದೇನೆ. ಇದು ಹೈಸ್ಕೂಲ್ ರಾಜ್ಯಮಟ್ಟದ ಟೂರ್ನಿ. ಪ್ಲೇಯಿಂಗ್ ಇಲೆವೆನ್ನಲ್ಲಿ ನಾಲ್ಕು ಮಂದಿ ಬಿ-1 ಆಟಗಾರರು ಕಡ್ಡಾಯ. ಬಿ-2 ಮತ್ತು ಬಿ-3 ವಿಭಾಗದ ಆಟಗಾರರೂ ಸೇರಿರುತ್ತಾರೆ. ಅಂಡರ್ ಆರ್ಮ್ ಬೌಲಿಂಗ್ ಮೂಲಕ ಆಡುತ್ತೇವೆ. ಬಾಲ್ನ ಶಬ್ದವನ್ನು ಕೇಳಿ ಬ್ಯಾಟಿಂಗ್ ಮಾಡುತ್ತೇವೆ. ಇಂತಹ ಟೂರ್ನಿಗಳು ಇನ್ನಷ್ಟು ನಡೆಯಬೇಕು. ನಾವು ರಾಷ್ಟ್ರೀಯ ಮಟ್ಟದಲ್ಲಿಯೂ ಭಾಗವಹಿಸಿದ್ದೇವೆ" ಎಂದರು.
ದೀಪ್ ಅಕಾಡೆಮಿ ತಂಡದ ನಾಯಕ ಹರ್ಷ ಮಾತನಾಡಿ, "ನಮ್ಮ ತಂಡದಲ್ಲಿ ನಾಲ್ಕು ಮಂದಿ ಬಿ-1, ನಾಲ್ಕು ಮಂದಿ ಬಿ-2 ಮತ್ತು ಮೂವರು ಬಿ-3 ಆಟಗಾರರು ಇದ್ದಾರೆ. ಬಾಲ್ ಒಳಗೆ ಗೆಜ್ಜೆ ಇರುವುದರಿಂದ ಅದರ ಶಬ್ದವನ್ನು ಆಧರಿಸಿ ಆಟ ನಡೆಯುತ್ತದೆ. ಬಿ-1 ಆಟಗಾರರು ಹೊಡೆಯುವ ಒಂದು ಸಿಂಗಲ್ ಎರಡು ರನ್ ಆಗುತ್ತದೆ. ಬಿ-2 ಮತ್ತು ಬಿ-3 ಆಟಗಾರರಿಗೆ ಸಾಮಾನ್ಯ ರನ್ ಲೆಕ್ಕವೇ ಅನ್ವಯಿಸುತ್ತದೆ. ಪಂದ್ಯ ಆರು ಓವರ್ ಮಾದರಿಯಲ್ಲಿ ನಡೆಯುತ್ತಿದೆ" ಎಂದು ವಿವರಿಸಿದರು.
ಮಂಗಳೂರಿನಲ್ಲಿ ನಡೆದ ಈ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿ ಕೇವಲ ಕ್ರೀಡಾಕೂಟವಲ್ಲವಾಗಿರದೆ ಅದು ಸಮಾನ ಅವಕಾಶ, ಆತ್ಮವಿಶ್ವಾಸದ ಪ್ರತೀಕವಾಗಿದೆ. ದೃಷ್ಟಿಯಿಲ್ಲದಿದ್ದರೂ ದೃಢ ಸಂಕಲ್ಪ ಇದ್ದರೆ ಕ್ರೀಡಾಂಗಣದಲ್ಲಿ ಸಾಧನೆ ಸಾಧ್ಯವೆಂಬ ಸಂದೇಶವನ್ನು ಈ ಕ್ರೀಡಾಕೂಟ ಮತ್ತೊಮ್ಮೆ ಸಾರಿದೆ.
ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಗವರ್ನರ್ ಲಯನ್ ಎಂ. ಬಿ. ಸದಾಶಿವ ಅವರು ಉದ್ಘಾಟಿಸಿದರು. ಸಿ.ಒ.ಡಿ.ಪಿ. ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರಾದ ವಂ. ಫಾ. ವಿನ್ಸೆಂಟ್ ಡಿಸೋಜಾ ಅವರು ಆಶೀರ್ವಚನ ನೀಡಿದರು. ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಅನಿಲ್ ಲೋಬೋ, ಅತಿಥಿಗಳಾಗಿ ಎರಿಕ್ ಡಿಸೋಜಾ, ಲಯನ್ ವೆಂಕಟೇಶ್ ಹೆಬ್ಬಾರ್ PMJF ಆಗಮಿಸಿದ್ದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ವಲ್ಸಾ ಜೀವನ್ ವಹಿಸಿದ್ದರು.
ಸಮಾರೋಪ ಸಮಾರಂಭದ ಅತಿಥಿಗಳಾಗಿ ಮಾಜಿ ಜಿಲ್ಲಾ ಗವರ್ನರ್ ಲಯನ್ ಸಂಜೀತ್ ಶೆಟ್ಟಿ PMJF, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಂಟಿ ನಿರ್ದೇಶಕರಾದ ಪ್ರದೀಪ್ ಡಿಸೋಜಾ, ಲಯನ್ ಅನಿಲ್ ಕುಮಾರ್ PMJF ಭಾಗವಹಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ವೆಲೆನ್ಸಿಯಾದ ಅಧ್ಯಕ್ಷರಾದ ಲಯನ್ ವಲ್ಸಾ ಜೀವನ್ MJF ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಚಾಲಕರಾದ ಲಯನ್ ಲೆಸ್ಲಿ ಡಿಸೋಜಾ, ಕಾರ್ಯದರ್ಶಿ ಲಯನ್ ಜೆರೋಮ್ ಕ್ಯಾಸ್ಟೆಲಿನೊ, ಕೋಶಾಧಿಕಾರಿ ಲಯನ್ ಸಿರಿಲ್ ಜೀವನ್, ಆ್ಯಕ್ಟಿವಿಟೀಸ್ ಚೇರ್ಪರ್ಸನ್ ಲಯನ್ ಪ್ರಶಾಂತ್ ಕೆ.ಪಿ. ಉಪಸ್ಥಿತರಿದ್ದರು.