ಉಡುಪಿ, ಫೆ. 08 (DaijiworldNews/AA): ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ನಗರದ ಅಂಬಾಗಿಲು ವಾರ್ಡ್ನ ಕಕ್ಕುಂಜೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.


ಮೃತರನ್ನು ಪುರುಷೋತ್ತಮ ನಾಯಕ್(52) ಎಂದು ಗುರುತಿಸಲಾಗಿದೆ.
ಪುರುಷೋತ್ತಮ ನಾಯಕ್ ಅವರು ಬಾವಿಗೆ ಜಿಗಿಯುವ ಮೊದಲು ನೈಲಾನ್ ಹಗ್ಗವನ್ನು ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅವರ ತಲೆ ದೇಹದಿಂದ ಬೇರ್ಪಟ್ಟಿದ್ದು, ಬಾವಿಯ ನೀರು ಸಂಪೂರ್ಣ ರಕ್ತಮಯವಾಗಿತ್ತು. ಈ ಭೀಕರ ದೃಶ್ಯವನ್ನು ಕಂಡು ಸ್ಥಳದಲ್ಲಿ ಜಮಾಯಿಸಿದ ಕುಟುಂಬಸ್ಥರು ಮತ್ತು ಸ್ಥಳೀಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಪುರುಷೋತ್ತಮ ನಾಯಕ್ ಅವರು ಮಣಿಪಾಲದ ಹೋಟೆಲ್ ಒಂದರಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿದ್ದರು. ಅವರು ತಮ್ಮ ಹಿರಿಯ ಮಗ ಗುರು ಅವರೊಂದಿಗೆ ಹತ್ತಿರದ ಮನೆಯಲ್ಲಿ ವಾಸಿಸುತ್ತಿದ್ದರು.
ಸಾಮಾಜಿಕ ಮತ್ತು ಧಾರ್ಮಿಕ ವಲಯಗಳಲ್ಲಿ ಚಿರಪರಿಚಿತರಾಗಿದ್ದ ಅವರು, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಕ್ಕುಂಜೆಯ ಕಟ್ಟೆ ಮಹಾದೇವಿ ದೇವಸ್ಥಾನದ ಆಡಳಿತ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಾಯಕ್ ಕುಟುಂಬವು ಸ್ಥಳೀಯವಾಗಿ ಸಾಕಷ್ಟು ಗೌರವ ಮತ್ತು ಮನ್ನಣೆಯನ್ನು ಹೊಂದಿದೆ.
ಹಣಕಾಸಿನ ತೊಂದರೆಯಿಂದಾಗಿ ಪುರುಷೋತ್ತಮ ನಾಯಕ್ ಅವರು ಖಿನ್ನತೆಗೆ ಒಳಗಾಗಿರಬಹುದು. ಇದೇ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಗಮನಿಸಿ: ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ರೀತಿಯ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯಕ್ಕಾಗಿ ಈ ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ: 9152987821.