ಬೆಳ್ತಂಗಡಿ, ಫೆ. 01 (DaijiworldNews/TA): ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಕಾಣಸಿಗುತ್ತಿದ್ದ ಚಿರತೆ ಇದೀಗ ನಗರದತ್ತ ಮುಖ ಮಾಡಿರುವ ಲಕ್ಷಣಗಳು ಕಂಡುಬಂದಿದೆ. ಶನಿವಾರ ಬೆಳಗ್ಗೆ ಬೆಳ್ತಂಗಡಿ ಪೇಟೆಯ ಮುಗುಳಿಯಲ್ಲಿರುವ ವಿದ್ಯಾರ್ಥಿ ನಿಲಯದ ಪಕ್ಕದ ತೋಟದಲ್ಲಿ ಚಿರತೆಯೊಂದು ಪತ್ತೆಯಾಗಿದ್ದು, ಜತೆಗೆ ಕೆಲ್ಲಗುತ್ತು ಜಂಕ್ಷನ್ ಬಳಿ ಮಹಿಳೆಯೊಬ್ಬರಿಗೆ ಚಿರತೆ ಘರ್ಜನೆ ಕೇಳಿರುವುದಾಗಿ ತಿಳಿದುಬಂದಿದೆ.

ಮುಗುಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸ್ ವಿದ್ಯಾರ್ಥಿ ನಿಲಯದ ಮಕ್ಕಳು ಶನಿವಾರ ಬೆಳಗ್ಗೆ ಬಟ್ಟೆ ತೊಳೆಯಲು ಹೊರಗೆ ಬಂದಾಗ ಅಲ್ಲೇ ಪಕ್ಕದ ಅಡಿಕೆ ತೋಟದಲ್ಲಿ ಚಿರತೆ ಇರುವುದನ್ನು ಕಂಡಿದ್ದಾರೆ. ಇದನ್ನು ಕಂಡು ಹೆದರಿ ಒಳಗೆ ಹೋಗಿ ಬಾಗಿಲು ಹಾಕಿ ನಿಲಯದ ಸಿಬಂದಿ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಮುಗುಳಿ ಪಕ್ಕದ ಕೆಲ್ಲಗುತ್ತು ಜಂಕ್ಷನ್ ಬಳಿ ಬೆಳಗ್ಗೆ 7ರ ಸುಮಾರಿಗೆ ಮಹಿಳೆಯೊಬ್ಬರು ಫ್ಯಾಕ್ಟರಿ ಕೆಲಸಕ್ಕೆ ಹೋಗುತ್ತಿರುವ ಸಂದರ್ಭ ಚಿರತೆ ರಸ್ತೆ ಬದಿ ಜೋರಾಗಿ ಘರ್ಜನೆ ಮಾಡಿರುವುದು ಮಹಿಳೆಗೆ ಕೇಳಿಸಿದೆ.
ಚಿರತೆ ಬರುತ್ತಿರುವ ಸೂಚನೆ ಅರಿತ ಅವರು ಭಯಭೀತರಾಗಿ ಬೆಳ್ತಂಗಡಿ ಪೇಟೆಯ ಕಡೆಗೆ ಓಡಿ ಹೋಗಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರಿಗೆ ಮಾಹಿತಿ ನೀಡಲಾಗಿದ್ದು, ಇಲಾಖೆಯ ಕಿರಣ್ ಪಾಟೀಲ್, ಪರಶಿವಮೂರ್ತಿ ಹಾಗೂ ಸ್ಥಳೀಯರು ಪರಿಶೀಲನೆ ನಡೆಸಿ ಚಿರತೆ ಬಂದಿರುವ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.