ಮಂಗಳೂರು, ಫೆ. 01 (DaijiworldNews/TA): ಭಾರತೀಯ ಪ್ರಾಚೀನ ವೈದ್ಯ ಪದ್ದತಿಗಳು ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಕೂಡ ನೀಡುತ್ತವೆ. ಇದು ಋಷಿ ಮುನಿಗಳು ಜಗತ್ತಿನ ಆರೋಗ್ಯ, ಕಲ್ಯಾಣಕ್ಕಾಗಿ ತೋರಿಸಿದ ಉತ್ತಮ ದಾರಿ ಎಂದು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧೀಶ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.


ಆಯುಷ್ ಹಬ್ಬ ಸಮಿತಿ- 2026 ವತಿಯಿಂದ ಮಂಗಳೂರಿನ ಡಾ| ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಆಯೋಜನೆಗೊಂಡ ಎರಡು ದಿನಗಳ ‘ಆಯುಷ್ ಹಬ್ಬ 2026‘ನ್ನು ಶನಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಸ್ವಸ್ಥ ಸಮಾಜ ಅಗತ್ಯ. ಇಂತಹ ಸಮಾಜ ನಿರ್ಮಾಣದಲ್ಲಿ ಪ್ರಾಚೀನ ವೈದ್ಯ ಪದ್ದತಿಯ ಪಾತ್ರ ದೊಡ್ಡದು. ಇದರ ಬಗ್ಗೆ ಜಾಗೃತಿ ಹೆಚ್ಚಾಗಬೇಕು ಎಂದು ಅವರು ತಿಳಿಸಿದರು.
ಮಂಗಳೂರು ಬಿಷಪ್ ಡಾ| ಪೀಟರ್ ಪೌಲ್ ಸಲ್ದಾನ್ಹ ಮಾತನಾಡಿ, ಅಲೋಪತಿ ಹಲವು ಕಾಯಿಲೆಗಳಿಗೆ ಲಸಿಕೆ, ಔಷಧಿ ನೀಡಿದೆ. ಆದರೆ ಇಂದು ಆಯುರ್ವೇದ, ಯುನಾನಿ ಮೊದಲಾದವುಗಳನ್ನು ಒಳಗೊಂಡ ಪಾರಂಪರಿಕವಾದ ಸಮಗ್ರ ವೈದ್ಯಪದ್ದತಿ ಕೂಡ ಜಾಗತಿಕವಾಗಿ ವ್ಯಾಪಕವಾಗಿ ಬಳಕೆಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ ಶೇ 40- ಶೇ.90 ರಷ್ಟು ಮಂದಿ ಬೇರೆ ಬೇರೆ ರೀತಿಯ ಸಾಂಪ್ರದಾಯಿಕ ವೈದ್ಯಕೀಯ ಪದ್ದತಿಯನ್ನು ಅನುಸರಿಸುತ್ತಿದ್ದಾರೆ. ಇದರ ಮಾರುಕಟ್ಟೆ ಕೂಡ ವಿಸ್ತರಣೆಯಾಗುತ್ತಿದೆ ಎಂದರು.
ಎಸ್ ವೈ ಎಸ್ ದ.ಕ ಜಿಲ್ಲಾಧ್ಯಕ್ಷ ಮೌಲಾನಾ ಅಬ್ದುಲ್ಅಝೀಝ್ ದಾರಿಮಿ ಅವರು ಮಾತನಾಡಿ, ಭಾರತ ಪ್ರಕೃತಿಯೊಂದಿಗೆ ಬದುಕಲು ಕಲಿಸುವ ಮಣ್ಣು. ಕರುನಾಡು, ತುಳುನಾಡು ಉಜ್ವಲ ಅವಕಾಶ ನೀಡಿದ ಪೃಥ್ವಿ. ಪ್ರಕೃತಿಯೊಂದಿಗೆ ಸೇರಿ ಬದುಕುವುದನ್ನು ನಮ್ಮ ಪಾರಂಪರಿಕ ಚಿಕಿತ್ಸಾ ಪದ್ದತಿ ಕಲಿಸಿಕೊಟ್ಟಿದೆ ಎಂದು ತಿಳಿಸಿದರು. ಮಾಹೆ ವಿವಿಯ ಪ್ರೊ ಚಾನ್ಸಲರ್ ಪ್ರೊ| ಎಚ್.ಎಸ್. ಬಳ್ಳಾಲ್, ಮಂಗಳೂರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವರು ಈ ವೇಳೆ ಮಾತನಾಡಿದರು.
‘ಆಯುಷ್ ಹಬ್ಬ ಸಮಿತಿ- 2026‘ರ ಅಧ್ಯಕ್ಷ ಡಾ| ಕೇಶವ ಪಿ.ಕೆ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಆಯುಷ್ ಅಧಿಕಾರಿ ಡಾ| ಮೊಹಮ್ಮದ್ ಇಕ್ಬಾಲ್, ಬೆಂಗಳೂರು ಎಸ್.ವ್ಯಾಸ ವಿ.ವಿ. ಕುಲಪತಿ ಡಾ| ಎಚ್. ಆರ್. ನಾಗೇಂದ್ರ, ಶಾರದಾ ಸಮುಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್, ಎಸ್ ಡಿ ಎಂ ಆಯುರ್ವೇದ ಮೆಡಿಕಲ್ ಕಾಲೇಜುಗಳ ನಿರ್ದೇಶಕ ಡಾ| ಪ್ರಸನ್ನ ನರಸಿಂಹ ರಾವ್, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆರೋಗ್ಯಕರ ಆಹಾರ ಹಬ್ಬ, ಮಹಿಳಾ ಸ್ವಾಸ್ಥ್ಯ ಹಬ್ಬ, ಆಯುಷ್ ಸೌಂದರ್ಯ ಹಬ್ಬ, ಹೃದಯ ಆರೋಗ್ಯ ಸಂಭ್ರಮ, ನಾಡಿ ತರಂಗಿಣಿ, ಒತ್ತಡ ನಿರ್ವಹಣಾ ಕೌಶಲ್ಯ, ಸಂತೃಪ್ತ ಜೀವನ ಸಂಧ್ಯಾ, ಸ್ವದೇಶಿ ಸಾವಯವ ಹಬ್ಬ, ಸ್ವಾಸ್ಥ್ಯ ಪ್ರದರ್ಶನ ಮತ್ತು ಔಷಧ ಮಳಿಗೆಗಳು, ವೈದ್ಯಕೀಯ ಅಧೀವೇಶನದ ಹಾಕಥಾನ್, ಸಾಂಸ್ಕೃತಿಕ ವೈಭವ, ಮನರಂಜನಾ ಹಬ್ಬ, ಮಕ್ಕಳ ಹಬ್ಬ, ಔಷಧಿ ಸಸ್ಯ ಪ್ರದರ್ಶನ, ಆಯುಷ್ ಚಿಕಿತ್ಸಾ ದರ್ಶನ ಮೊದಲಾದವುಗಳು ಆಯುಷ್ ಹಬ್ಬದಲ್ಲಿವೆ.