ಉಡುಪಿ, ಜ. 24 (DaijiworldNews/AA): ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣದ ಆರೋಪಿಯೊಬ್ಬ ಜಿಲ್ಲಾಸ್ಪತ್ರೆಯಿಂದ ಪರಾರಿಯಾಗಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ತೆಂಕನಿಡಿಯೂರು ನಿವಾಸಿ ಕಿರಣ್ ಪಿಂಟೋ (49) ಎಂದು ಗುರುತಿಸಲಾಗಿದೆ. ಜನವರಿ 18 ರಂದು ಬ್ರಹ್ಮಾವರದ ಬಾರ್ ಒಂದರ ಎದುರು ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದನು. ಘಟನೆಯಲ್ಲಿ ಗಾಯಗೊಂಡಿದ್ದ ಈತನನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಜನವರಿ 21 ರ ಮುಂಜಾನೆ ಈತ ಪೊಲೀಸರ ಕಣ್ಣು ತಪ್ಪಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದನು. ಕಾರ್ಯಾಚರಣೆ ನಡೆಸಿದ ಬ್ರಹ್ಮಾವರ ಪೊಲೀಸರು, ಜನವರಿ 24 ರಂದು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಜನವರಿ 18 ರ ರಾತ್ರಿ ಕೊಡವೂರು ನಿವಾಸಿ ಅಶ್ವಿನಿ ನಾಯಕ್ ಎಂಬುವವರು ತಮ್ಮ ಸ್ನೇಹಿತೆ ಸುಷ್ಮಾ ಗೌಡ ಅವರೊಂದಿಗೆ ಬ್ರಹ್ಮಾವರದ ಬಾರ್ ಸಮೀಪ ತನ್ನ ಸಂಬಂಧಿ ಪ್ರವೀಣ್ನನ್ನು ಹುಡುಕಿಕೊಂಡು ಬಂದಿದ್ದರು. ಈ ವೇಳೆ ಅಲ್ಲಿಯೇ ಇದ್ದ ಕಿರಣ್ ಪಿಂಟೋ ಮತ್ತು ಪ್ರವೀಣ್ ಡಿಕ್ರೂಜ್ ಎಂಬುವವರು ಅಶ್ವಿನಿ ಮತ್ತು ಸುಷ್ಮಾ ಅವರಿಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಅಶ್ವಿನಿ ಅವರು ಅಲ್ಲಿ ಮಲಗಿದ್ದ ಪ್ರವೀಣ್ನನ್ನು ಎಬ್ಬಿಸಲು ಹೋದಾಗ, ಪ್ರವೀಣ್ ಡಿಕ್ರೂಜ್ ಅವರು ಅಶ್ವಿನಿ ಮತ್ತು ಸುಷ್ಮಾ ಅವರನ್ನು ಕೆಳಕ್ಕೆ ತಳ್ಳಿ, ಅಶ್ವಿನಿ ಅವರ ಬಟ್ಟೆ ಹರಿದು ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್ ಪಿಂಟೋ ಕೂಡ ಪ್ರತಿ ದೂರು ದಾಖಲಿಸಿದ್ದು, ಪ್ರವೀಣ್ ತನ್ನನ್ನು ಬಾರ್ ಬಳಿ ಬರಲು ಹೇಳಿದ್ದಾಗಿ ತಿಳಿಸಿದ್ದಾರೆ. ಸುಜಿತ್ ಡಿಸೋಜಾ, ಸುಷ್ಮಾ ಗೌಡ ಮತ್ತು ಅಶ್ವಿನಿ ನಾಯಕ್ ಅವರು ಕಾರಿನಲ್ಲಿ ಸ್ಥಳಕ್ಕೆ ಆಗಮಿಸಿ ಗಲಾಟೆ ಮಾಡಿದ್ದು, ಪ್ರವೀಣ್ ಡಿಕ್ರೂಜ್ ಎಂಬುವವರು ಕಬ್ಬಿಣದ ರಾಡ್ನಿಂದ ತನ್ನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಕಿರಣ್ ಪಿಂಟೋ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಈಗಾಗಲೇ ಪೇತ್ರಿ ನಿವಾಸಿ ಸುಜಿತ್ ಡಿಸೋಜಾ ಮತ್ತು ತೀರ್ಥಹಳ್ಳಿ ನಿವಾಸಿ ಪ್ರವೀಣ್ ಡಿಕ್ರೂಜ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮತ್ತೋರ್ವ ಆರೋಪಿ ಸುಷ್ಮಾ ಗೌಡ ಸದ್ಯ ತಲೆಮರೆಸಿಕೊಂಡಿದ್ದಾರೆ.