ಮಂಗಳೂರು, ಜ. 24 (DaijiworldNews/TA): ಕಾವೂರು ಪರಿಸರದ ಸಹಕಾರಿ ಸಂಸ್ಥೆಯೊಂದರಲ್ಲಿ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು 14.89 ಲಕ್ಷ ರೂ. ಸಾಲ ಪಡೆದ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ನಝೀರ್, ಜಮಾಲುದ್ದೀನ್ ಎ.ಎಚ್. ಮತ್ತು ಸೈನಾಝ್ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ದಿಲ್ಶಾದ್ ತಲೆಮರೆಸಿಕೊಂಡಿದ್ದಾಳೆ.

ಈ ನಾಲ್ವರು ಆರೋಪಿಗಳು 2024ರ ಜೂ.24ರಿಂದ 2024ರ ಅ.5ವರೆಗೆ ಸುಮಾರು 14.89ಲಕ್ಷ ರೂ. ಮೌಲ್ಯದ ಬಳೆಗಳನ್ನು ಅಡವಿಟ್ಟಿದ್ದರು. ಬ್ಯಾಂಕಿನ ಚಿನ್ನಾಭರಣ ಪರೀಕ್ಷಕರು ಅಸಲಿ ಎಂದು ದೃಢೀಕರಿಸಿದ ಬಳಿಕ ಚಿನ್ನಾಭರಣದ ಪರೀಕ್ಷಕರು ನೀಡಿದ ಆಧಾರದ ಮೇಲೆಯೇ ಸಾಲ ನೀಡಲಾಗಿತ್ತು. 2025 ಜು.7ರಂದು ಸದಸ್ಯರು ಅಡವಿಟ್ಟ ಚಿನ್ನವನ್ನು ವಾರ್ಷಿಕವಾಗಿ ಪರೀಕ್ಷಿಸಲು ಪರೀಕ್ಷಕರನ್ನು ಕರೆಸಿದಾಗ ಮೊಹಮ್ಮದ್ ನಝೀರ್, ಜಮಾಲುದ್ದೀನ್ ಹಾಗೂ ದಿಲ್ಶಾದ್ ಅಡವಿಟ್ಟ ಬಳೆಗಳೆಲ್ಲವೂ ನಕಲಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಆರೋಪಿಗಳಲ್ಲಿ ವಿಚಾರಿಸಿದಾಗ ಹಣ ಕಟ್ಟುವುದಾಗಿ ತಿಳಿಸಿದ್ದರು. ಆದರೆ ಈ ವರೆಗೆ ಹಣ ಕಟ್ಟಿಲ್ಲ.
ಆರೋಪಿಗಳು ಜಾಲವೊಂದನ್ನು ರಚಿಸಿ ಮೋಸ ಮಾಡುವ ಉದ್ದೇಶದಿಂದಲೇ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ. ಪ್ರಕರಣದಲ್ಲಿ ಆರೋಪಿಗಳಾದ ಮೊಹಮ್ಮದ್ ನಝೀರ್, ಜಮಾಲುದ್ದೀನ್ ಎ.ಎಚ್., ದಿಲ್ಶಾದ್ ಹಾಗೂ ನಕಲಿ ಚಿನ್ನ ಅಡಮಾನ ಇರಿಸಲು ಬಂದಿದ್ದ ಸೈನಾಝ್ ವಿರುದ್ಧ ಸಹಕಾರಿ ಸಂಘದ ಮೆನೇಜರ್ ದೂರು ನೀಡಿದ್ದಾರೆ.