ಬಂಟ್ವಾಳ, ಜ. 19 (DaijiworldNews/TA): ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ವಠಾರದಲ್ಲಿ ಬಂಟ್ವಾಳ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಫರಂಗಿಪೇಟೆ ಮಂಡಲದ ವತಿಯಿಂದ ಹಿಂದೂ ಸಂಗಮ ಸಮಾರಂಭ ನಡೆಯಿತು.


ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಪ್ರಚಾರಕ ಅರುಣ್ ಕುಮಾರ್ ಪ್ರಧಾನ ಭಾಷಣ ಮಾಡಿದರು. ಪುದು ಗೋವಿನತೋಟ ರಾಧಾ ಸುರಭಿ ಗೋ ಮಂದಿರದ ಭಕ್ತಿಭೂಷಣ್ ದಾಸ್ ಪ್ರಭೂಜಿ ಅವರು, ಭಗವಂತನ ಅವತಾರಗಳು ಭಾರತದಲ್ಲೇ ಆಗಿದ್ದು, ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವು ಧನ್ಯರು ಎಂದರು. ಮಹಿಳಾ ವಕ್ತಾರೆ ಲತಾ ಶ್ರೀನಿವಾಸ್ ತುಂಬೆ ಮಾತನಾಡಿದರು.
ಬಂಟ್ವಾಳ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕರ್ಪೆ ವೇದಿಕೆಯಲ್ಲಿದ್ದರು. ಪ್ರಾರಂಭದಲ್ಲಿ ಕಡೆಗೋಳಿ ಜಂಕ್ಷನ್ ನಿಂದ ನಡೆದ ಶೋಭಾಯಾತ್ರೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಉದ್ಘಾಟಿಸಿದರು.