ಸುಳ್ಯ, ಜ. 19 (DaijiworldNews/TA): ಸರ್ವೆ ನಂಬರ್ 85 /2ರ ಸ್ವಾಧೀನದ ಜಾಗದಲ್ಲಿ ಭೂ ಪರಿವರ್ತನೆ ಗೊಳ್ಳದೆ ಹಾಗೂ ಈ- ಖಾತೆ ಪಡೆಯದೆ , ವಾಣಿಜ್ಯ ಉದ್ದೇಶದ ಕಟ್ಟಡಗಳು ಕಾರ್ಯನಿರ್ವಹಿಸುತ್ತಿರುವ ಆರೋಪ ಹಾಗೂ ದೂರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಇದೀಗ ಅನಧಿಕೃತ ಕಟ್ಟಡಗಳಲ್ಲಿ ಯಾವುದೇ ವ್ಯಾಪಾರ ವಹಿ ವಹಿವಾಟನ್ನು ನಡೆಸದಂತೆ ನೋಟಿಸ್ ನೀಡಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ಆದಿ ಸುಬ್ರಮಣ್ಯ ಎಂಬಲ್ಲಿ ಸರ್ವೆ ನಂಬರ್ 85 /2ರ ಸ್ವಾಧೀನದ ಜಾಗದಲ್ಲಿ ಅನಧಿಕೃತ ಅಂಗಡಿಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತಿಗೆ ದೂರು ಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಜಾಗದ ಮಾಲಕರಾದ ಎಂವಿ ಮಂಜುನಾಥ ಹಾಗೂ ಎಂವಿ ಶ್ರೀವತ್ಸ ಬಳ್ಪ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಜಾಗದಲ್ಲಿನ ನಿವೇಶನಗಳಿಗೆ ಭೂ ಪರಿವರ್ತನೆ ಗೊಳಿಸಿ ಹಾಗೂ ಈ- ಖಾತೆ ಪಡೆದುಕೊಂಡು ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯಿಂದ ನಿಯಮಾನಸಾರ ವ್ಯಾಪಾರ ಪರವಾನಿಗೆ ಪಡಕೊಳ್ಳುವಂತೆ ಹಾಗೂ ಅಲ್ಲಿಯ ವರೆಗೆ ಇರುವಂತಹ ಅನಧಿಕೃತ ಕಟ್ಟಡಗಳಲ್ಲಿ ಯಾವುದೇ ವ್ಯಾಪಾರ ವಹಿವಾಟನ್ನು ನಡೆಸದಂತೆ ಮತ್ತು ತಪ್ಪಿದಲ್ಲಿ ಮತ್ತು ಮುಂದಿನ ಕ್ರಮ ಕೈಗೊಳ್ಳುವುದಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ತಿಳಿಸಿದೆ.